ಸಸ್ಯಾಹಾರ ದಿನದಂದು ಆಗಲಿ ಸತ್ಯಶೋಧನೆ

ಆರೋಗ್ಯ ಪ್ರಭ: ಸಸ್ಯಾಹಾರ ದಿನದಂದು ಆಗಲಿ ಸತ್ಯಶೋಧನೆ [ಕನ್ನಡ ಪ್ರಭ, ಅಕ್ಟೋಬರ್ 1, 2015, ಗುರುವಾರ]

ಮೀನು, ಮಾಂಸ, ಮೊಟ್ಟೆಗಳನ್ನು ತಿಂದು ಮನುಷ್ಯರಾದವರು ಮತ್ತೆ ಸಸ್ಯಾಹಾರಿಗಳಾಗುವುದೆಂದರೆ ಜೀವವಿಕಾಸವನ್ನು 30-40 ಲಕ್ಷ ವರ್ಷ ಹಿನ್ನಡೆಸಿದಂತೆ, ಗಳಿಸಿದ ಮನೋದೈಹಿಕ ಸಾಮರ್ಥ್ಯಗಳನ್ನು ನಿರಾಕರಿಸಿದಂತೆ. ಹಾಗಾಗಿ, ಮನುಷ್ಯರನ್ನು ಸಂಪೂರ್ಣ ಸಸ್ಯಾಹಾರಿಗಳಾಗುವಂತೆ ಪ್ರೇರೇಪಿಸುವುದರಿಂದ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗಬಹುದು.

ಇಂದು, ಅಕ್ಟೋಬರ್ 1, ವಿಶ್ವ ಸಸ್ಯಾಹಾರ ದಿನ. ರಾಷ್ಟ್ರೀಯ ಆರೋಗ್ಯ ಜಾಲಕಿಂಡಿಯನುಸಾರ, ಸಸ್ಯಾಹಾರದ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಿ, ಜನರನ್ನು ಸಸ್ಯಾಹಾರಿಗಳಾಗುವಂತೆ ಪ್ರೇರೇಪಿಸುವುದು ಈ ದಿನಾಚರಣೆಯ ಉದ್ದೇಶ. ಆದರೆ ಮನುಷ್ಯರ ವಿಕಾಸ, ದೇಹದ ರಚನೆ ಮತ್ತು ಕ್ರಿಯೆಗಳು, ಆಹಾರದ ಒಳಿತು-ಕೆಡುಕುಗಳು ಎಲ್ಲವೂ ಶತಸಿದ್ಧಗೊಳ್ಳುತ್ತಿರುವಾಗ, ಶೇ. 95ರಷ್ಟಿರುವ ಮಿಶ್ರಾಹಾರಿ ಮನುಷ್ಯರನ್ನು ಸಸ್ಯಾಹಾರಿಗಳಾಗುವಂತೆ ಉತ್ತೇಜಿಸುವುದು ಫಲದಾಯಕವೇ?

ಭೂಮಿಯ ಮೇಲೆ ಈಗಿರುವ ಎಲ್ಲಾ ಮನುಷ್ಯರೂ ಹೋಮೋ ಸಾಪಿಯನ್ಸ್ ಸಾಪಿಯೆನ್ಸ್ ಎಂಬ ಪ್ರಾಣಿಗಳು; ಎರಡು ಲಕ್ಷ ವರ್ಷಗಳ ಹಿಂದೆ ಆಫ್ರಿಕಾದ ಸೀಳು ಕಣಿವೆಗಳಲ್ಲಿ ವಿಕಾಸ ಹೊಂದಿದವರ ಸಂತಾನದವರು. ಎಲ್ಲಾ ಮನುಜರ ನಡುವೆ ಶೇ. 99.9ರಷ್ಟು ಸಾಮ್ಯತೆ (ಹೊರಚಹರೆಯಷ್ಟೇ ಬೇರೆ) [Science 2002;298(5602):2381]; ನಾವೆಲ್ಲರೂ ಒಂದೇ ಜಾತಿ, ಒಂದೇ ಮತ, ಒಂದೇ ಕುಲ.

ಸಸ್ಯಾಹಾರಿ ವಾನರರು ಮಿಶ್ರಾಹಾರಿ ಮಾನವರಾಗುವುದಕ್ಕೆ 30-40 ಲಕ್ಷ ವರ್ಷಗಳೇ ಬೇಕಾದವು.[Science 2014;345(6192):1236828] ಪರಿಸರದ ವೈಪರೀತ್ಯಗಳಿಂದ, ಅದರಲ್ಲೂ 26 ಲಕ್ಷ ವರ್ಷಗಳ ಹಿಂದೆ ತೊಡಗಿದ ಹಿಮಯುಗದಿಂದ, ಸಸ್ಯರಾಶಿಯು ಬಾಧಿತವಾದಾಗ ನಮ್ಮ ಪೂರ್ವಜರಿಗೆ ಆಹಾರವು ದುರ್ಲಭವಾಯಿತು. ಆಗ ಸೀಳು ಕಣಿವೆಯ ಕೊಳ್ಳಗಳಿದ್ದ ಮೀನು, ಆಮೆ, ಮೊಸಳೆ ಮುಂತಾದ ಜಲಚರಗಳನ್ನು ತಿನ್ನಬೇಕಾಯಿತು, ಅದರಿಂದಾಗಿ ಮಿದುಳು ಬಲಿಯಿತು.[PNAS 2010;107(2):10002, Quat Sci Rev, 2014;101:1] ಮಿದುಳು ಬೆಳೆದಂತೆ ಬೇಟೆಯಾಡುವ ಕೌಶಲವೂ ಬೆಳೆಯಿತು, ಪ್ರಾಣಿ-ಪಕ್ಷಿಗಳ ಮಾಂಸವೂ ದಕ್ಕಿತು. ಆಹಾರವಸ್ತುಗಳನ್ನು ಜಜ್ಜಿ ಮೆದುಗೊಳಿಸಿ, ಬೆಂಕಿಯಲ್ಲಿ ಬೇಯಿಸಿ, ತಿನ್ನತೊಡಗಿದ್ದರಿಂದ ಅವು ಸುಲಭವಾಗಿ ಜೀರ್ಣಗೊಂಡು ಇನ್ನಷ್ಟು ಪೌಷ್ಠಿಕಾಂಶಗಳು ದೊರೆಯುವಂತಾಯಿತು. ಇವೆಲ್ಲವುಗಳಿಂದ ಪಚನಾಂಗ ಕಿರಿದಾಯಿತು, ಮಿದುಳು ಹಿಗ್ಗಿ ಅತಿ ಸಂಕೀರ್ಣವಾಯಿತು, ದೇಹ ದೊಡ್ಡದಿದ್ದರೂ ಹೆಚ್ಚು ಸಕ್ರಿಯವಾಯಿತು, ಉನ್ನತ ಸಾಮಾಜಿಕ ಕೌಶಲಗಳನ್ನು ಬೆಳೆಸಿಕೊಳ್ಳುವುದಕ್ಕೂ ಸಾಧ್ಯವಾಯಿತು.[Evol Anthro: Iss, News, Rev 1999;8(1):11, Comp Biochem Phys 2003;136(1):35, Science 2007;316:1558, Annu Rev Nutr 2010;30:291] ಮಾಂಸಾಹಾರವು ಆದಿಮಾನವರ ಸಂತಾನಶಕ್ತಿಯನ್ನೂ ಹೆಚ್ಚಿಸಿತು; ಚಿಂಪಾಂಜಿಗಳ ಆಯುಸ್ಸು 60 ವರ್ಷ, ಮಕ್ಕಳಿಗೆ ಮೊಲೆಯೂಡಿಸುವ ಅವಧಿ 4-5 ವರ್ಷಗಳಿರುವಲ್ಲಿ, ಮನುಷ್ಯರ ಆಯುಸ್ಸು 120 ವರ್ಷ, ಮೊಲೆಯೂಡಿಸುವ ಅವಧಿ ಕೇವಲ 2 ವರ್ಷ 4 ತಿಂಗಳು ಆಗುವಂತಾಯಿತು.[PLoS ONE 2012;7(4):e32452]

ಮೀನು, ಮಾಂಸ, ಮೊಟ್ಟೆಗಳನ್ನು ತಿಂದು ಮನುಷ್ಯರಾದವರು ಮತ್ತೆ ಸಸ್ಯಾಹಾರಿಗಳಾಗುವುದೆಂದರೆ ಜೀವವಿಕಾಸವನ್ನು 30-40 ಲಕ್ಷ ವರ್ಷ ಹಿನ್ನಡೆಸಿದಂತೆ, ಗಳಿಸಿದ ಮನೋದೈಹಿಕ ಸಾಮರ್ಥ್ಯಗಳನ್ನು ನಿರಾಕರಿಸಿದಂತೆ. ಶಿಶುಗಳು ಹಾಗೂ ಮಕ್ಕಳ ಮನೋದೈಹಿಕ ಬೆಳವೆಣಿಗೆಗೆ ಪ್ರೊಟೀನು, ಮೇದಸ್ಸುಗಳು ಇಂದಿಗೂ ಬೇಕು; ದಿನವಿಡೀ ತಿನ್ನಬಲ್ಲ ಶ್ರೀಮಂತರ ಮಕ್ಕಳಿಗೆ ಇವು ಸಸ್ಯಾಹಾರದಿಂದ ಸಿಕ್ಕರೂ, ಬಡತನದಲ್ಲಿರುವವರಿಗೆ ಮೊಟ್ಟೆ-ಮಾಂಸಗಳಿಂದಲೇ ಸಿಗಬೇಕು.[J Nutr 2003;133(11):3886S] ರಾಜಸಿಕ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಮಾಂಸಾಹಾರವೊಂದೇ ದಾರಿಯಾಗಿದೆ, ಹಗಲಿರುಳು ದುಡಿಯುವ ಜನರನ್ನು ಸಸ್ಯಾಹಾರಿಗಳಾಗುವಂತೆ ಬಲಾತ್ಕರಿಸಿದರೆ ದೇಶದ ಸ್ವಾತಂತ್ರ್ಯವೇ ನಾಶವಾಗುತ್ತದೆ ಎಂದು ಸ್ವಾಮಿ ವಿವೇಕಾನಂದರೂ ಹೇಳಿದ್ದರು.[ಸಂಪೂರ್ಣ ಕೃತಿಗಳು, 4;486]

ಎರಡು ಲಕ್ಷ ವರ್ಷಗಳ ಹಿಂದೆ ಮಿಶ್ರಾಹಾರಿಗಳಾಗಿ ವಿಕಾಸಗೊಂಡ ಮನುಷ್ಯರು, ಹತ್ತು ಸಾವಿರ ವರ್ಷಗಳಿಂದೀಚೆಗೆ ಧಾನ್ಯಗಳನ್ನು ಬೆಳೆಸತೊಡಗಿದ ಬಳಿಕ ಸಸ್ಯಾಹಾರವನ್ನೇ ಹೆಚ್ಚು ಸೇವಿಸುವಂತಾಯಿತು; ಮಾಂಸಪ್ರಧಾನ ಆಹಾರವು ಧಾನ್ಯಪ್ರಧಾನ ಆಹಾರವಾಗಿ ಬದಲಾಯಿತು. ಹಳೆ ಶಿಲಾಯುಗದ ಆಹಾರದಲ್ಲಿ ಶೇ. 70ರಷ್ಟು ಮೀನು, ಮಾಂಸ, ಮೊಟ್ಟೆಗಳೂ, ಇನ್ನುಳಿದಂತೆ ತರಕಾರಿಗಳು, ಬೀಜಗಳು, ಗೆಡ್ಡೆಗಳು ಹಾಗೂ ಅಪರೂಪಕ್ಕೊಮ್ಮೆ ಕಾಡಿನ ಹಣ್ಣುಗಳೂ ಇರುತ್ತಿದ್ದವು. ಧಾನ್ಯಗಳು ಹಾಗೂ ಅವುಗಳನ್ನು ಅರೆದು ತಯಾರಿಸಿದ ಬ್ರೆಡ್ಡು ಇತ್ಯಾದಿಗಳ ಬಳಕೆ ಹೆಚ್ಚಿದಂತೆ ತರಕಾರಿಗಳೂ, ಮೀನು-ಮಾಂಸಗಳೂ ಬದಿಗೆ ಸರಿದವು. ಮೂರು ಸಾವಿರ ವರ್ಷಗಳಿಂದೀಚೆಗೆ ಸಕ್ಕರೆಯ ಬಳಕೆಯೂ ತೊಡಗಿ, ಕಳೆದ ಮುನ್ನೂರು ವರ್ಷಗಳಲ್ಲಿ 60-100 ಪಟ್ಟು ಹೆಚ್ಚಿತು. ಮಾಂಸಜನ್ಯ ಕೊಲೆಸ್ಟರಾಲ್ ಹಾಗೂ ಪರ್ಯಾಪ್ತ ಮೇದಸ್ಸು ಹೃದ್ರೋಗಕ್ಕೆ ಕಾರಣವೆಂದು 1955ರಿಂದ ಹೇಳತೊಡಗಿದ ಬಳಿಕ, ಅದರಲ್ಲೂ 1980ರಲ್ಲಿ ಅಮೆರಿಕದ ಸರಕಾರವು ಪ್ರಕಟಿಸಿದ ಆಹಾರಸೂಚಿಯಲ್ಲಿ ಇವನ್ನು ಮಿತಿಗೊಳಿಸಬೇಕೆಂದು ಹೇಳಿದ ಬಳಿಕ, ಮೊಟ್ಟೆ-ಮಾಂಸಗಳ ಸೇವನೆಯು ಅಲ್ಪಪ್ರಮಾಣಕ್ಕಿಳಿಯತೊಡಗಿತು, ಧಾನ್ಯಗಳು, ಹಣ್ಣುಗಳು, ಸಕ್ಕರೆ ಹಾಗೂ ಹಾಲಿನ ಉತ್ಪನ್ನಗಳೆಂಬ ಸಸ್ಯಾಹಾರದ ಪ್ರಮಾಣವು ಶೇ. 70-80ಕ್ಕೇರಿತು.[Am J Clin Nutr 2000;71(3):682] ಈಗೀಗ ಪೌಷ್ಠಿಕತೆಗಿಂತ ರುಚಿಯೇ ಪ್ರಧಾನವಾಗಿ, ಸಂಸ್ಕರಿತ ಸಸ್ಯಾಹಾರಗಳೇ ಹೊಟ್ಟೆ ತುಂಬತೊಡಗಿವೆ.

ಸಸ್ಯಾಹಾರವು ಮನೋದೈಹಿಕ ಆರೋಗ್ಯಕ್ಕೆ ಪೂರಕವೆಂದು ಹೇಳಲಾಗುತ್ತಿದ್ದರೂ, ವಾಸ್ತವವು ಬೇರೆಯೇ ಆಗಿದೆ. ಬ್ರೆಡ್ ಮುಂತಾದ ಧಾನ್ಯಾಹಾರದ ಸೇವನೆಯು ಹೆಚ್ಚಿದಂತೆ, ದಂತಕ್ಷಯ, ರಕ್ತನಾಳಗಳ ಕಾಯಿಲೆ ಮುಂತಾದ ರೋಗಗಳೂ ಕಾಣಿಸತೊಡಗಿದವು ಎನ್ನುವುದಕ್ಕೆ ಈಜಿಪ್ಟಿನ ಮಮ್ಮಿಗಳಲ್ಲೇ ಪುರಾವೆಗಳಿವೆ.[JAMA. 2009;302(19):2091] ಅಮೆರಿಕ ಸರಕಾರದ ಸಲಹೆಯಂತೆ ಮಾಂಸಾಹಾರವನ್ನು ಕಡಿತಗೊಳಿಸಿ, ಸಸ್ಯಾಹಾರವನ್ನು ಹೆಚ್ಚಿಸಿದ ಬಳಿಕ ಬೊಜ್ಜು, ಮಧುಮೇಹಗಳು ಮೂರು ಪಟ್ಟು ಹೆಚ್ಚಾಗಿವೆ, ಮಕ್ಕಳನ್ನೂ ಕಾಡತೊಡಗಿವೆ.

ಮಾಂಸ ಹಾಗೂ ಸೊಪ್ಪು-ತರಕಾರಿಗಳಿದ್ದ ಹಳೆ ಶಿಲಾಯುಗದ ಆಹಾರವು ಕರುಳಲ್ಲಿ ಮೆಲ್ಲಗೆ ಸಾಗಿ, ಅಲ್ಪಸ್ವಲ್ಪ ಜೀರ್ಣವಾಗಿ, ಶರ್ಕರಗಳನ್ನು ಅತಿ ನಿಧಾನವಾಗಿ ಬಿಡುಗಡೆಗೊಳಿಸುವಂತಿದ್ದರೆ, ಸಕ್ಕರೆ, ಹಣ್ಣಿನ ರಸ, ಸಂಸ್ಕರಿತ ಧಾನ್ಯಗಳೇ ತುಂಬಿರುವ ಆಧುನಿಕ ಆಹಾರವು ಕರುಳಲ್ಲಿ ಅತಿ ಬೇಗನೆ ಸಾಗಿ, ಅತಿ ಬೇಗನೆ ಜೀರ್ಣವಾಗಿ ರಕ್ತಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಶರ್ಕರಾಂಶಗಳನ್ನು ಸೇರಿಸುತ್ತದೆ. ಹೀಗೆ ಸಸ್ಯಾಹಾರದಿಂದ ವಿಪರೀತ ಪ್ರಮಾಣದಲ್ಲಿ ರಕ್ತವನ್ನು ಸೇರುವ ಗ್ಲೂಕೋಸ್ ಹಾಗೂ ಫ್ರಕ್ಟೋಸ್ ಶರ್ಕರಾಂಶಗಳು ನಮ್ಮ ಉಪಾಪಚಯವನ್ನು ತೊಂದರೆಗೀಡು ಮಾಡಿ, ಆಧುನಿಕ ರೋಗಗಳಿಗೆ ಕಾರಣವಾಗುತ್ತವೆ ಎನ್ನುವುದೀಗ ದೃಢಗೊಳ್ಳುತ್ತಿದೆ.

ಮಾಂಸಾಹಾರದಲ್ಲಿರುವ ಮೇದಸ್ಸು ಹಾಗೂ ಪ್ರೊಟೀನುಗಳು ಘ್ರೆಲಿನ್ ಎಂಬ ಹಾರ್ಮೋನನ್ನು ತಗ್ಗಿಸಿ ಹಸಿವನ್ನು ಇಂಗಿಸುತ್ತವೆ, ಲೆಪ್ಟಿನ್ ಎಂಬ ಹಾರ್ಮೋನನ್ನು ಹೆಚ್ಚಿಸಿ ಸಂತೃಪ್ತಿಯನ್ನುಂಟು ಮಾಡುತ್ತವೆ. ಹಾಗೆಯೇ, ಪಚನಾಂಗದಿಂದ ಸ್ರವಿಸಲ್ಪಡುವ ಕೋಲೆಸಿಸ್ಟೋಕೈನಿನ್, ಜಿಎಲ್ ಪಿ – 1, ಪಿವೈವೈ ಗಳಂತಹ ಇನ್ನಿತರ ಸಂತೃಪ್ತಿಜನಕ ಹಾರ್ಮೋನುಗಳನ್ನೂ ಮಾಂಸಾಹಾರವೇ ಹೆಚ್ಚು ಪ್ರಚೋದಿಸುತ್ತದೆ. ಶರ್ಕರಗಳು ಇದಕ್ಕೆ ತದ್ವಿರುದ್ಧವಾಗಿ ವರ್ತಿಸುವುದರಿಂದ ಸಂತೃಪ್ತಿಯು ಕಡಿಮೆಯಾಗಿ, ಹಸಿವು ಹೆಚ್ಚಿ, ಪದೇ ಪದೇ ತಿನ್ನುವಂತಾಗುತ್ತದೆ.[J Clin Endo Metab 2004;89:2963, Br J Nutr 2015;113(4):574]

ಸಸ್ಯಾಹಾರವಾದ ಶರ್ಕರಗಳೇ ಶರಾಬಿನ ಮೂಲವಾಗಿದ್ದು, ಶರಾಬಿನಂತೆಯೇ ವರ್ತಿಸುತ್ತವೆ; ಅವು ಚಟವನ್ನುಂಟು ಮಾಡುವುದಷ್ಟೇ ಅಲ್ಲದೆ, ಯಕೃತ್ತಿಗೂ ಹಾನಿಯುಂಟು ಮಾಡುತ್ತವೆ.[Adv Nutr 2013;4:226] ಸಕ್ಕರೆ, ಹಣ್ಣಿನ ರಸ ಹಾಗೂ ಸಂಸ್ಕರಿತ ಧಾನ್ಯಗಳ ಅತಿ ಸೇವನೆಯಿಂದ ರಕ್ತದಲ್ಲಿ ಟ್ರೈಗ್ಲಿಸರೈಡ್, ಕೊಲೆಸ್ಟರಾಲ್ ಹಾಗೂ ಯೂರಿಕಾಮ್ಲಗಳು ಏರುತ್ತವೆ; ಬೊಜ್ಜು, ಮಧುಮೇಹ, ರಕ್ತದ ಏರೊತ್ತಡ, ಹೃದ್ರೋಗ, ಯಕೃತ್ತು, ಮಿದುಳು ಹಾಗೂ ಮೂತ್ರಪಿಂಡಗಳ ಕಾಯಿಲೆಗಳಿಗೂ, ಕ್ಯಾನ್ಸರ್ ಇತ್ಯಾದಿಗಳಿಗೂ ದಾರಿಯಾಗುತ್ತದೆ.[Am J Clin Nutr 2007;86:899, Physiol Rev 2010;90(1):23, Nature Rev Gastro Hepatol 2010;7:251, Nature 2012;482(7383):27, Am J Pub Health 2012;102(9):1630, Pediatric Obesity 2015;10.1111/ijpo.12048]

ಸಸ್ಯಾಹಾರವನ್ನು ಜೀರ್ಣಿಸಲು ಜೊಲ್ಲುರಸದಿಂದ ಹಿಡಿದು ದೊಡ್ಡ ಕರುಳೊಳಗಿನ ಶತಲಕ್ಷ ಕೋಟಿ ಸೂಕ್ಷ್ಮಾಣುಗಳು ಬೇಕಾಗುತ್ತವೆ. ಸಕ್ಕರೆಯ ಅತಿ ಸೇವನೆಯಿಂದ ಬಾಯಿ ಹಾಗೂ ಕರುಳೊಳಗಿನ ಸೂಕ್ಷ್ಮಾಣುಗಳಿಗೆ ತೊಂದರೆಯಾಗಿ ಹಲ್ಲು ಹಾಗೂ ಒಸಡಿನ ರೋಗಗಳಿಗೂ, ಹಲತರದ ಮನೋದೈಹಿಕ ಸಮಸ್ಯೆಗಳಿಗೂ ದಾರಿಯಾಗುತ್ತದೆ.[Diab Meta Syn Ob: Tar Ther. 2012;5:175, J Psych Res 2015;63:1]

ಶರ್ಕರಗಳು ಹಾಗೂ ಖಾದ್ಯತೈಲಗಳು ಆತಂಕ, ಖಿನ್ನತೆ, ಇಚ್ಛಿತ್ತ ವಿಕಲತೆ, ಗಮನ ಹೀನತೆ ಹಾಗೂ ಚಡಪಡಿಕೆ, ಕೋಪ ಹಾಗೂ ದಾಳಿಕೋರತನ ಮುಂತಾದ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದೆಂದೂ, ಇದಕ್ಕಿದಿರಾಗಿ, ಮೀನಿನಂತಹ ಮಾಂಸಾಹಾರವು ಇವನ್ನು ತಡೆಯಬಲ್ಲದೆಂದೂ ಹಲವು ಅಧ್ಯಯನಗಳು ತೋರಿಸಿವೆ.[Biol Psych 1984;19(3):385, Dep Anx 2002;16:118, Eur J Clin Nutr 2004;58(1):24, Brit J Psych 2009;195(4):366, Inj Prev 2012;18(4):259, Am J Clin Nutr 2015;ajcn103846, PLoS One 2015;10(3):e0120220, J Health Psychol 2015;20(6):785]

ಸಸ್ಯಾಹಾರದ ಶರ್ಕರಗಳ ಅತಿ ಸೇವನೆಯೇ ಮನೋದೈಹಿಕ ರೋಗಗಳಿಗೆ ಕಾರಣವಾಗುತ್ತಿದೆಯೆನ್ನುವುದು ದೃಢಗೊಳ್ಳುತ್ತಿರುವಲ್ಲಿ, ಹಳೆ ಶಿಲಾಯುಗದ ಆಹಾರಕ್ರಮವನ್ನು ಈಗಲೂ ಅನುಸರಿಸುತ್ತಿರುವ ಬುಡಕಟ್ಟುಗಳಲ್ಲಿ ಅಂತಹಾ ರೋಗಗಳಿಲ್ಲವೆನ್ನುವುದೂ ಸ್ಪಷ್ಟವಾಗುತ್ತಿದೆ.[Scand J Nutr 2005;49 (2):75] ಅಲ್ಲದೆ, ಆಹಾರದಲ್ಲಿ ಶರ್ಕರಗಳನ್ನು ಗಣನೀಯವಾಗಿ ಕಡಿತಗೊಳಿಸಿದರೆ ಅಂತಹಾ ರೋಗಗಳನ್ನು ನಿಯಂತ್ರಿಸಲು ಸಾಧ್ಯವೆನ್ನುವುದನ್ನೂ ಹಲವು ಅಧ್ಯಯನಗಳು ತೋರಿಸಿವೆ.[Nutrition 2015;31(1):1] ಹಾಗಿರುವಾಗ, ಮನುಷ್ಯರನ್ನು ಸಸ್ಯಾಹಾರಿಗಳಾಗುವಂತೆ ಪ್ರೇರೇಪಿಸುವುದರಿಂದ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗಬಹುದು.

Leave a Reply

Your email address will not be published. Required fields are marked *