ವಿಪರೀತವಾದರೆ ತಿನ್ನುವುದರಿಂದ ಸಂತಾನಶಕ್ತಿ ಹರಣ

ಆರೋಗ್ಯ ಆಶಯ – ವಿಜಯ ಕರ್ನಾಟಕ: ವಿಪರೀತವಾದರೆ ತಿನ್ನುವುದರಿಂದ ಸಂತಾನಶಕ್ತಿ ಹರಣ [ಜೂನ್ 25, 2014, ಬುಧವಾರ] [ನೋಡಿ | ನೋಡಿ]

ಸಂತಾನಹೀನತೆಗೆ ಲೆಪ್ಟಿನ್, ಇನ್ಸುಲಿನ್ ನಂತಹ ಹಾರ್ಮೋನುಗಳ ಸಮಸ್ಯೆಯೇ ಕಾರಣ, ದೋಷ-ಪಾಪ-ಶಾಪಗಳಲ್ಲ

ಸಂತಾನಭಾಗ್ಯವಿಲ್ಲದವರಿಗೆ ಗರ್ಭಧಾರಣೆಗೆ ನೆರವಾಗುವ ಸೌಲಭ್ಯಗಳ ಬಗ್ಗೆ ಬೃಹತ್ ಗಾತ್ರದ ಜಾಹೀರಾತುಗಳು ಎಲ್ಲೆಂದರಲ್ಲಿ ಸಾಮಾನ್ಯವಾಗಿಬಿಟ್ಟಿವೆ. ಸಂತಾನೋತ್ಪತ್ತಿಯ ವಯೋಮಾನದವರಲ್ಲಿ ಫಲಹೀನತೆ ಹೆಚ್ಚುತ್ತಿರುವುದರಿಂದ ಪ್ರನಾಳೀಯ ಫಲೀಕರಣದಂತಹ ತಂತ್ರಜ್ಞಾನಕ್ಕೆ ಬೇಡಿಕೆ ಹೆಚ್ಚುತ್ತಿದೆ. ವಿಪರ್ಯಾಸವೆಂದರೆ, ವಯಸ್ಕರು ಫಲಹೀನರಾಗುತ್ತಿರುವಲ್ಲಿ ಇಂದಿನ ಮಕ್ಕಳು ಬೇಗನೇ ಪ್ರೌಢರಾಗುತ್ತಿದ್ದಾರೆ. ಒಟ್ಟಿನಲ್ಲಿ ಈ ಪೀಳಿಗೆಯ ಸಂತಾನಶಕ್ತಿಯಲ್ಲಿ ವಿಶೇಷವಾದ ಬದಲಾವಣೆಗಳಾಗುತ್ತಿವೆ.

ಕಳೆದೆರಡು ದಶಕಗಳಲ್ಲಿ ಸಂತಾನಹೀನತೆಯ ಪ್ರಮಾಣವು ದುಪ್ಪಟ್ಟಾಗಿದೆ: 1990ರಲ್ಲಿ ಶೇ. 8ರಷ್ಟು ದಂಪತಿಗಳಲ್ಲಿ ಸಂತಾನವನ್ನು ಪಡೆಯುವ ಸಮಸ್ಯೆಯಿದ್ದರೆ ಈಗ ಶೇ.12-18ರಷ್ಟು, ಅಂದರೆ ಆರರಲ್ಲೊಬ್ಬರು, ಅಂತಹಾ ಸಮಸ್ಯೆಯನ್ನು ಹೊಂದಿದ್ದಾರೆ. ಕಳೆದೈದು ವರ್ಷಗಳಲ್ಲಿ ನಮ್ಮ ದೇಶದಲ್ಲಿ ಸಂತಾನಹೀನತೆಯುಳ್ಳವರ ಸಂಖ್ಯೆಯಲ್ಲಿ ಶೇ.20-30ರಷ್ಟು ಏರಿಕೆಯಾಗಿದೆ. ದೊಡ್ಡ ನಗರಗಳಷ್ಟೇ ಅಲ್ಲದೆ ಸಣ್ಣ ಪಟ್ಟಣಗಳಲ್ಲೂ, ಹಳ್ಳಿಗಳಲ್ಲೂ ಈ ಸಮಸ್ಯೆಯು ಹೆಚ್ಚುತ್ತಲಿದೆ. ಹೆಂಗಸರಲ್ಲೂ, ಅವರಿಗಿಂತ ಹೆಚ್ಚಾಗಿ ಗಂಡಸರಲ್ಲೂ, ಫಲಹೀನತೆಯು ಹೆಚ್ಚುತ್ತಿದೆ.

ಇದೇ ಕಾಲಾವಧಿಯಲ್ಲಿ ಮಕ್ಕಳು ಪ್ರೌಢಾವಸ್ಥೆಗೆ ಕಾಲಿಡುವ ವಯಸ್ಸಿನಲ್ಲಿ ಗಣನೀಯವಾದ ಇಳಿಕೆಯಾಗಿದೆ. ನಾಲ್ಕೈದು ದಶಕಗಳ ಹಿಂದೆ ಹುಡುಗಿಯರು 14-16ರ ವಯಸ್ಸಿಗೆ ಮೈನೆರೆಯುತ್ತಿದ್ದರೆ, ಈಗ 11-12ಕ್ಕೇ ಮೈನೆರೆಯುತ್ತಿದ್ದಾರೆ. ಅಮೆರಿಕಾದಂತಹ ದೇಶಗಳಲ್ಲಿ ಶೇ. 16ರಷ್ಟು ಹುಡುಗಿಯರು 7ನೇ ವಯಸ್ಸಿನಲ್ಲಿ, ಶೇ. 30ರಷ್ಟು ಹುಡುಗಿಯರು 8ನೇ ವಯಸ್ಸಿನಲ್ಲಿ ಪ್ರೌಢರಾಗುತ್ತಿದ್ದಾರೆ. ನಗರವಾಸಿ ಮಕ್ಕಳು ಹಳ್ಳಿಗಳಲ್ಲಿರುವ ಮಕ್ಕಳಿಗಿಂತ 2-3 ವರ್ಷ ಮೊದಲೇ ಪ್ರೌಢರಾಗುತ್ತಾರೆ.

ಇಂದಿನ ಪೀಳಿಗೆಯವರು ಬೇಗನೇ ಪ್ರೌಢರಾಗುವುದಕ್ಕೂ, ನಂತರ ಸಂತಾನಸಾಮರ್ಥ್ಯದ ಕೊರತೆಯಿಂದ ಬಳಲುವುದಕ್ಕೂ ಕಾರಣಗಳೇನು? ಕಳೆದೆರಡು ದಶಕಗಳಲ್ಲಿ ನಮ್ಮ ಜೀವನ ಶೈಲಿ, ಒತ್ತಡಗಳು, ಆಹಾರಕ್ರಮಗಳು, ಪರಿಸರ ಮಾಲಿನ್ಯ ಇತ್ಯಾದಿಗಳಲ್ಲಾಗಿರುವ ಬದಲಾವಣೆಗಳು ಉತ್ತರ ನೀಡಬಹುದು.

ಮನುಷ್ಯರ ಸಂತಾನೋತ್ಪತ್ತಿಯ ವ್ಯವಸ್ಥೆಯು ಅತ್ಯಂತ ಸಂಕೀರ್ಣವೂ, ಸೂಕ್ಷ್ಮಸಂವೇದಿಯೂ ಆಗಿದೆ. ನರಮಂಡಲ, ಹೆಚ್ಚಿನೆಲ್ಲಾ ನಿರ್ನಾಳ ಗ್ರಂಥಿಗಳು ಮತ್ತವುಗಳ ಸ್ರಾವಗಳು ಹಾಗೂ ದೇಹದ ಎಲ್ಲಾ ಪ್ರಮುಖ ಅಂಗಗಳು ಈ ವ್ಯವಸ್ಥೆಯಲ್ಲಿ ಭಾಗವಹಿಸುತ್ತವೆ. ನರಮಂಡಲ ಹಾಗೂ ನಿರ್ನಾಳ ಸ್ರಾವಗಳ (ಹಾರ್ಮೋನುಗಳ) ಸಂವಹನವು ದೇಹದೊಳಗಿನ ಹಾಗೂ ಹೊರಪರಿಸರದ ಸ್ಥಿತಿಗತಿಗಳಿಗನುಗುಣವಾಗಿ ಈ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ನಮ್ಮ ಜೀವನ ಶೈಲಿ ಹಾಗೂ ಆಹಾರಗಳಿಂದಾಗಿ ಈ ಸೂಕ್ಷ್ಮ ತಾಳಮೇಳವು ಕೆಡಬಹುದೆನ್ನಲು ಪುರಾವೆಗಳೀಗ ದೊರೆಯತೊಡಗಿವೆ.

ಗಂಡು-ಹೆಣ್ಣಿನ ಜನನಾಂಗಗಳಲ್ಲಿ ವೀರ್ಯಾಣುಗಳು/ಅಂಡಾಣುಗಳು ಬೆಳೆಯುತ್ತವೆ ಹಾಗೂ ಇಸ್ಟ್ರೋಜನ್, ಪ್ರೊಜೆಸ್ಟರಾನ್ ಮತ್ತು ಟೆಸ್ಟೊಸ್ಟಿರಾನ್ ಎಂಬ ಸ್ತ್ರೀ-ಪುರುಷ ಸಂಬಂಧಿ ಹಾರ್ಮೋನುಗಳು ಸ್ರವಿಸಲ್ಪಡುತ್ತವೆ. ಇವು ಮೆದುಳೊಳಗೆ ಹುದುಗಿರುವ ಪಿಟ್ಯುಟರಿ ಗ್ರಂಥಿಯಿಂದ ಸ್ರವಿಸಲ್ಪಡುವ ಎರಡು ಜನನಾಂಗ ಪ್ರಚೋದಕ ಹಾರ್ಮೋನುಗಳಿಂದ ನಿಯಂತ್ರಿಸಲ್ಪಡುತ್ತವೆ, ಈ ಪಿಟ್ಯುಟರಿ ಸ್ರಾವಗಳು ಹೈಪೊಥಲಮಸಿನ ಪ್ರಚೋದನೆಯಿಂದ ಪ್ರಭಾವಿತವಾಗುತ್ತವೆ. ಈ ಹೈಪೊಥಲಮಸ್ ದೇಹದ ಒಳ-ಹೊರಗಿನ ಬದಲಾವಣೆಗಳಿಂದ ಪ್ರಭಾವಿತಗೊಂಡು ಅದಕ್ಕನುಗುಣವಾಗಿ ಸಂತಾನೋತ್ಪತ್ತಿಯ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ಇಂದಿನ ಆಹಾರ ಹಾಗೂ ಪರಿಸರಗಳು ಈ ಹೈಪೊಥಲಮಸ್-ಪಿಟ್ಯುಟರಿ-ಜನಾಂಗಗಳ ಅಕ್ಷದ ಮೇಲೆ ದುಷ್ಪರಿಣಾಮ ಬೀರುತ್ತವೆ.

ನಮ್ಮ ದೇಹದಲ್ಲಿ ಮೇದಸ್ಸನ್ನು ತುಂಬಿಕೊಳ್ಳುವ ಜೀವಕೋಶಗಳು ಲೆಪ್ಟಿನ್ ಎಂಬ ಹಾರ್ಮೋನನ್ನು ಸ್ರವಿಸುತ್ತವೆ. ಈ ಲೆಪ್ಟಿನ್ ದೇಹದಲ್ಲಿ ಅದೆಷ್ಟು ಆಹಾರವು (ಮೇದಸ್ಸು) ಸಂಚಯವಾಗಿದೆಯೆನ್ನುವ ಮಾಹಿತಿಯನ್ನು ಹೈಪೊಥಲಮಸಿಗೆ ನೀಡುತ್ತದೆ. ಅದಕ್ಕನುಗುಣವಾಗಿ ಜನನಾಂಗಗಳ ಕಾರ್ಯವನ್ನು ಹೈಪೊಥಲಮಸ್ ಪ್ರಚೋದಿಸುತ್ತದೆ. ಅಂದರೆ ನಾವು ತಿನ್ನುವ ಆಹಾರದ ಪ್ರಮಾಣ ಹಾಗೂ ಅದರಿಂದ ದೇಹದೊಳಗೆ ಸಂಚಯವಾಗುವ ಮೇದಸ್ಸಿನ ಪ್ರಮಾಣಗಳು ನಾವು ಪ್ರೌಢಾವಸ್ಥೆಗೆ ತಲುಪುವುದನ್ನೂ, ನಮ್ಮ ಸಂತಾನಶಕ್ತಿಯನ್ನೂ ನಿರ್ಧರಿಸುತ್ತವೆ. ಎಷ್ಟು ಅಗತ್ಯವೋ ಅಷ್ಟೇ ತಿಂದರೆ ಇವು ಸುಸೂತ್ರವಾಗಿರುತ್ತದೆ, ಅಗತ್ಯಕ್ಕಿಂತ ಹೆಚ್ಚು ತಿಂದು ಬೊಜ್ಜು ಹೆಚ್ಚಿದರೆ ಲೆಪ್ಟಿನ್ ಏರಿ ಪ್ರೌಢಾವಸ್ಥೆ ಬೇಗನೇ ಬರುತ್ತದೆ, ನಂತರ ಜನನಾಂಗಗಳ ಪ್ರಚೋದನೆ ವಿಪರೀತವಾಗಿ ಸಂತಾನೋತ್ಪತ್ತಿಗೆ ತೊಂದರೆಯಾಗುತ್ತದೆ.

ಮೇದೋಜೀರಕಾಂಗದ ಬೀಟಾ ಕಣಗಳು ಸ್ರವಿಸುವ ಇನ್ಸುಲಿನ್ ಹಾರ್ಮೋನು ಕೂಡಾ ನಮ್ಮ ಸಂತಾನಶಕ್ತಿಯ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ನಾವು ತಿನ್ನುವ ಶರ್ಕರಗಳೆಲ್ಲವೂ ಇನ್ಸುಲಿನ್ ಸ್ರಾವವನ್ನು ಪ್ರಚೋದಿಸುತ್ತವೆ, ಇನ್ಸುಲಿನ್ ಈ ಶರ್ಕರಗಳನ್ನು ಮೇದಸ್ಸಾಗಿ ಪರಿವರ್ತಿಸಲು ಕಾರಣವಾಗಿ, ಬೊಜ್ಜು ಹೆಚ್ಚುತ್ತದೆ, ಅದರಿಂದ ಲೆಪ್ಟಿನ್ ಏರುತ್ತದೆ. ಹೀಗೆ ನಾವು ಶರ್ಕರಗಳನ್ನು ಹೆಚ್ಚು-ಹೆಚ್ಚು ತಿಂದಷ್ಟು ಇನ್ಸುಲಿನ್ ಹಾಗೂ ಲೆಪ್ಟಿನ್ ಎರಡೂ ಏರುತ್ತವೆ. ಇನ್ಸುಲಿನ್ ಏರಿದಂತೆ ಟೆಸ್ಟೊಸ್ಟಿರಾನ್ ಪ್ರಮಾಣವೂ ಏರುತ್ತದೆ, ಅದರಿಂದಾಗಿ ಪಿಟ್ಯುಟರಿಯಿಂದ ಸ್ರವಿಸಲ್ಪಡುವ ಪ್ರಚೋದಕ ಹಾರ್ಮೋನುಗಳು ಏರುಪೇರಾಗುತ್ತವೆ, ಜನನಾಂಗಗಳ ಕೆಲಸವೆಲ್ಲವೂ ಕೆಡುತ್ತದೆ. ಮಹಿಳೆಯರಲ್ಲಿ ಹಲವು ಅಂಡಾಣುಗಳು ಅರ್ಧಂಬರ್ಧ ಬೆಳೆಯುವುದರಿಂದ (ಪಾಲಿ ಸಿಸ್ಟಿಕ್ ಓವರಿ ಅಥವಾ ಪಿಸಿಒ) ಋತುಚಕ್ರವು ಅವ್ಯವಸ್ಥಿತವಾಗುತ್ತದೆ. ಇಂದು ಶೇ.50ರಷ್ಟು ಮಹಿಳೆಯರಲ್ಲಿ ಸಂತಾನಹೀನತೆಗೆ ಪಿಸಿಓ ಕಾರಣವಾಗಿದೆ. ಪುರುಷರಲ್ಲಿ ಇಂತಹ ಬದಲಾವಣೆಗಳಿಂದ ವೀರ್ಯಾಣುಗಳ ಬೆಳವಣಿಗೆಗೆ ತೊಂದರೆಯಾಗುತ್ತದೆ.

ಹೆಣ್ಮಕ್ಕಳಲ್ಲಿ ಇನ್ಸುಲಿನ್ ಹೆಚ್ಚಿ ಟೆಸ್ಟೊಸ್ಟಿರಾನ್ ಪ್ರಮಾಣವು ಏರಿದಾಗ ಗಂಡಸರಂತೆ ಕೂದಲುಗಳು ಬೆಳೆಯುತ್ತವೆ. ಗಂಡು ಮಕ್ಕಳಲ್ಲಿ ಬೊಜ್ಜಿನಿಂದಾಗಿ ಸ್ತ್ರೀಸಹಜ ಹಾರ್ಮೋನಾದ ಇಸ್ಟ್ರೋಜನ್ ಏರತೊಡಗುತ್ತದೆ, ಅದರಿಂದಾಗಿ ಅವರ ಲೈಂಗಿಕ ಬೆಳವಣಿಗೆಗೆ ತೊಂದರೆಯಾಗುತ್ತದೆ, ಕೆಲವರಲ್ಲಿ ಸ್ತನಗಳ ಗಾತ್ರವು ಬೆಳೆಯುತ್ತದೆ. ಒಟ್ಟಿನಲ್ಲಿ ಮಕ್ಕಳು ವಿಪರೀತ ಪ್ರಮಾಣದಲ್ಲಿ ಶರ್ಕರಗಳನ್ನು ಸೇವಿಸುವುದರಿಂದ ಅವರ ಲೈಂಗಿಕ ಬೆಳವಣಿಗೆಯ ಮೇಲೆ ಗಂಭೀರವಾದ ಪರಿಣಾಮಗಳಾಗುವ ಸಾಧ್ಯತೆಗಳಿವೆ.

ಶರ್ಕರಗಳ ಅತಿಸೇವನೆ ಮಾತ್ರವಲ್ಲ, ಇನ್ನು ಕೆಲವು ಅಂಶಗಳಿಂದಲೂ ಸಂತಾನಶಕ್ತಿಯಲ್ಲಿ ಕುಂದುಂಟಾಗಬಹುದೆಂದು ಶಂಕಿಸಲಾಗಿದೆ. ಪಶು ಹಾಲಿನ ಸೇವನೆಯು ಇನ್ಸುಲಿನ್ ಹಾಗೂ ಇನ್ಸುಲಿನ್ ನಂತಹ ಬೆಳೆತಕಾರಕಗಳ ಪ್ರಮಾಣವನ್ನು ಹೆಚ್ಚಿಸುತ್ತದೆಯಲ್ಲದೆ, ಇಸ್ಟ್ರೋಜನ್ ಹಾಗೂ ಪ್ರೊಜೆಸ್ಟರಾನ್ ಗಳ ಹೆಚ್ಚಳಕ್ಕೂ ಕಾರಣವಾಗುತ್ತದೆ. ಪಶು ಹಾಲು ಮತ್ತದರ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸುವ ಹೆಣ್ಮಕ್ಕಳಲ್ಲಿ ಪಿಸಿಒ ಹಾಗೂ ಅತಿಕೂದಲಿನಂತಹ ಸಮಸ್ಯೆಗಳು ಮತ್ತು ಗಂಡು ಮಕ್ಕಳಲ್ಲಿ ಲೈಂಗಿಕ ಬೆಳವಣಿಗೆಯ ಸಮಸ್ಯೆಗಳು ಹೆಚ್ಚಿರುವ ಸಾಧ್ಯತೆಗಳಿವೆಯೆಂದು ಅಧ್ಯಯನಗಳು ತೋರಿಸಿವೆ. ಸೋಯಾ ಮತ್ತದರ ಉತ್ಪನ್ನಗಳಲ್ಲಿ ಸಸ್ಯಜನ್ಯ ಇಸ್ಟ್ರೋಜನ್ ಹೆಚ್ಚಿರುವುದರಿಂದ ಜನನಾಂಗಗಳ ಮೇಲೆ ಪ್ರಭಾವ ಬೀರಬಹುದೆಂದು ಹೇಳಲಾಗಿದೆ. ಪಾಲಿಕಾರ್ಬನೇಟ್ ಪ್ಲಾಸ್ಟಿಕ್ (ಬಾಟಲು ಇತ್ಯಾದಿ) ಹಾಗೂ ಪಿವಿಸಿ ಪ್ಲಾಸ್ಟಿಕ್ (ಆಟಿಕೆ, ನಳ್ಳಿ, ಪರದೆಗಳು ಇತ್ಯಾದಿ) ಗಳಲ್ಲಿರುವ ಬಿಸ್ಫಿನಾಲ್ ಎ ಮತ್ತು ಥಾಲೇಟ್ ನಂತಹ ಸಂಯುಕ್ತಗಳು ಸೂಕ್ಷ್ಮಸಂವೇದಿಯಾದ ನಿರ್ನಾಳ ವ್ಯವಸ್ಥೆಯ ಮೇಳೆ ದುಷ್ಪರಿಣಾಮ ಬೀರಬಲ್ಲವೆಂದು ಗುರುತಿಸಲಾಗಿದೆ. ಅದೇ ರೀತಿ ಡಿಡಿಟಿ, ಎಂಡೋಸಲ್ಫಾನ್ ನಂತಹ ಕೀಟನಾಶಕಗಳು, ವಾಹನದ ಇಂಧನಗಳು, ಇತರ ಔದ್ಯಮಿಕ ರಾಸಾಯನಿಕಗಳು ಕೂಡಾ ಈ ವ್ಯವಸ್ಥೆಯ ಮೇಲೆ ಪ್ರಭಾವ ಬೀರಬಹುದಾಗಿದೆ. ಜೊತೆಗೆ, ವ್ಯಾಯಾಮದ ಕೊರತೆ, ಮದ್ಯಪಾನ ಹಾಗೂ ಧೂಮಪಾನ, ವಿಪರೀತ ಒತ್ತಡಗಳು, ಅನಗತ್ಯ ಔಷಧ ಸೇವನೆ ಇತ್ಯಾದಿಗಳೂ ಸಂತಾನಶಕ್ತಿಯನ್ನು ಕುಂಠಿತಗೊಳಿಸಬಲ್ಲವು.

ಆದ್ದರಿಂದ ನಮ್ಮ ಸಂತಾನಶಕ್ತಿಯು ಆರೋಗ್ಯಕರವಾಗಿ ಉಳಿಯಬೇಕಾದರೆ ಎಳೆಯ ವಯಸ್ಸಿನಿಂದಲೇ ಅದನ್ನು ಕಾಪಾಡಬೇಕಾದದ್ದು ಅತ್ಯಗತ್ಯ. ಅದು ಸಾಧ್ಯವಾಗಬೇಕಿದ್ದರೆ ಪುಟ್ಟ ಮಕ್ಕಳಾದಿಯಾಗಿ ಎಲ್ಲರೂ ಆರೋಗ್ಯಕರ ಆಹಾರವನ್ನು ಹಿತಮಿತವಾಗಿ ಸೇವಿಸುವುದು ಅತಿ ಮುಖ್ಯ. ಸಕ್ಕರೆ, ಸಿಹಿಭರಿತವಾದ ಎಲ್ಲಾ ತಿನಿಸುಗಳು ಹಾಗೂ ಪೇಯಗಳು; ಹಣ್ಣುಗಳು ಹಾಗೂ ರಸಗಳು; ಪಶು ಹಾಲು ಮತ್ತದರ ಉತ್ಪನ್ನಗಳು; ಐಸ್ ಕ್ರೀಂ; ಬ್ರೆಡ್, ನೂಡಲ್ಸ್, ಬಿಸ್ಕತ್ತು ಮುಂತಾದ ಸಂಸ್ಕರಿತ ಶರ್ಕರಗಳು; ಸೋಯಾ ಮತ್ತದರ ಉತ್ಪನ್ನಗಳು ಇತ್ಯಾದಿಗಳನ್ನು ಸೇವಿಸದಿರುವುದೇ ಒಳ್ಳೆಯದು. ಇನ್ನುಳಿದ ಪ್ರಕೃತಿದತ್ತ ಆಹಾರವಸ್ತುಗಳನ್ನು ಹಿತಮಿತವಾಗಿ, ಹಸಿವಿಗನುಗುಣವಾಗಿ ತಿನ್ನುವುದೊಳ್ಳೆಯದು. ನಿರ್ನಾಳ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಬಲ್ಲ ಸಂಯುಕ್ತಗಳನ್ನು ದೂರವಿಡುವುದೊಳ್ಳೆಯದು.

ಸಂತಾನಹೀನತೆಗೆ ನಾಗದೋಷ, ಪಾಪಕರ್ಮ, ಅನ್ಯರ ಶಾಪ ಇತ್ಯಾದಿಗಳಿಗಿಂತ ನಮ್ಮ ಆಹಾರ ಹಾಗೂ ಜೀವನಶೈಲಿಗಳಿಂದಾಗಿ ಲೆಪ್ಟಿನ್, ಇನ್ಸುಲಿನ್, ಟೆಸ್ಟೋಸ್ಟಿರಾನ್, ಇಸ್ಟ್ರೋಜನ್ ಮುಂತಾದ ಹಾರ್ಮೋನುಗಳಲ್ಲಾಗುವ ಏರುಪೇರುಗಳೇ ಕಾರಣವೆನ್ನಲು ಅಡ್ಡಿಯಿರಲಾರದು. ಆದ್ದರಿಂದ ಸಂತಾನರಹಿತರು ದೋಷ-ಪಾಪ-ಶಾಪ ಪರಿಹಾರಕ್ಕೆಳಸುವ ಬದಲು ತಮ್ಮ ಲೆಪ್ಟಿನ್-ಇನ್ಸುಲಿನ್ ಇತ್ಯಾದಿಗಳು ಸುಸೂತ್ರವಾಗಿದೆಯೇ ಎಂದು ನೋಡಿಕೊಂಡರೆ ಹೆಚ್ಚು ಪ್ರಯೋಜನವಾದೀತು. ಹಾಗೆಯೇ ಗರ್ಭಧಾರಣೆಗೆ ನೆರವಾಗುವ ಅತ್ಯಾಧುನಿಕ ಚಿಕಿತ್ಸೆಯ ಮೊರೆ ಹೋಗುವ ಮೊದಲು ಇಂದಿನ ಸಂಸ್ಕರಿತ ಆಹಾರ ಸೇವನೆಯನ್ನು ತೊರೆದು ಹಿಂದಿನ ಹಿತಮಿತವಾದ ಆಹಾರದತ್ತ ಹೊರಳಿ ನೋಡುವುದೊಳ್ಳೆಯದು.

Leave a Reply

Your email address will not be published. Required fields are marked *