ಸಸ್ಯಾಹಾರ ಶ್ರೇಷ್ಠ ಎಂಬುವರಿಗೆ ಕೇಂದ್ರದ ಗುದ್ದು

ಆರೋಗ್ಯ ಪ್ರಭ: ಸಸ್ಯಾಹಾರ ಶ್ರೇಷ್ಠ ಎಂಬುವರಿಗೆ ಕೇಂದ್ರದ ಗುದ್ದು [ಕನ್ನಡ ಪ್ರಭ, ಅಕ್ಟೋಬರ್ 29, 2015, ಗುರುವಾರ]

ಶಾಲೆಗಳಲ್ಲಿ ಸಕ್ಕರೆ ಹಾಗೂ ಸಂಸ್ಕರಿತ ಸಸ್ಯಾಹಾರವನ್ನು ವರ್ಜಿಸಿ, ತರಕಾರಿಗಳು, ಇಡೀ ಧಾನ್ಯಗಳು ಹಾಗೂ ಮಾಂಸಾಹಾರವನ್ನು ಹೆಚ್ಚಾಗಿ ಸೇವಿಸಬೇಕು ಎಂದಿದೆ ರಾಷ್ಟ್ರೀಯ ಆಹಾರ ಸುರಕ್ಷಾ ಪ್ರಾಧಿಕಾರದ ಹೊಸ ಮಾರ್ಗದರ್ಶಿಕೆ. ಜೊತೆಗೆ ಇದರಲ್ಲಿ ಯೋಗಾಭ್ಯಾಸವನ್ನು ಕೈಬಿಡಲಾಗಿದೆ. ಇಲ್ಲಿನ ಸಲಹೆಗಳನ್ನು ಶಾಲೆಗಳಲ್ಲದೆ, ಮನೆಯಲ್ಲೂ ಅಳವಡಿಸಿಕೊಳ್ಳುವುದು ಸೂಕ್ತ.

ಸಸ್ಯಾಹಾರ ಮೇಲೋ, ಮಾಂಸಾಹಾರ ಮೇಲೋ ಎಂಬ ಚರ್ಚೆ ನಡೆಯುತ್ತಿರುವಾಗಲೇ, ಶಾಲಾ ಮಕ್ಕಳಿಗೆ ಮಾಂಸಾಹಾರವನ್ನು ಉತ್ತೇಜಿಸುವ ಆಹಾರ ಮಾರ್ಗದರ್ಶಿಕೆಯನ್ನು ಇದೇ ಅಕ್ಟೋಬರ್ 12ರಂದು ಕೇಂದ್ರ ಸರಕಾರವು ಪ್ರಕಟಿಸಿದೆ. ಶಾಲೆಗಳಲ್ಲಿ ಹಾಗೂ ಅವುಗಳಿಂದ 500 ಗಜ ವ್ಯಾಪ್ತಿಯಲ್ಲಿ ತ್ಯಾಜ್ಯ ತಿನಿಸುಗಳನ್ನೂ, ಲಘು ಪೇಯಗಳನ್ನೂ ನಿಷೇಧಿಸಬೇಕು ಎಂದು ಪ್ರಾರ್ಥಿಸಿ ಉದಯ ಪ್ರತಿಷ್ಠಾನವು ಡಿಸೆಂಬರ್ 2010ರಲ್ಲಿ ಸಲ್ಲಿಸಿದ್ದ ಅರ್ಜಿಯ ಮೇಲೆ ದಿಲ್ಲಿ ಉಚ್ಛ ನ್ಯಾಯಾಲಯವು ನೀಡಿದ ಆದೇಶದಂತೆ ರಾಷ್ಟ್ರೀಯ ಆಹಾರ ಸುರಕ್ಷೆ ಹಾಗೂ ಮಾನಕಗಳ ಪ್ರಾಧಿಕಾರವು ಈ ಕರಡನ್ನು ಸಿದ್ಧಪಡಿಸಿದೆ (ಇಲ್ಲಿದೆ: http://www.fssai.gov.in/Portals/0/pdf/Order_Draft_Guidelines_School_Children.pdf). ಇದು ಸದ್ಯದಲ್ಲೇ ಅಧಿಕೃತ ನೀತಿಯಾಗಿ ದೇಶದಾದ್ಯಂತ ಜಾರಿಗೊಳ್ಳಲಿದೆ.

ಅಕ್ಟೋಬರ್ 1 ರಂದು ಇಲ್ಲೇ ಪ್ರಕಟವಾಗಿದ್ದ ‘ಸಸ್ಯಾಹಾರ ದಿನದಂದು ಸತ್ಯಶೋಧನೆ’ ಎಂಬ ಅಂಕಣಕ್ಕೂ, ಈ ಕರಡು ಮಾರ್ಗದರ್ಶಿಕೆಗೂ ಬಹಳಷ್ಟು ಸಾಮ್ಯತೆಗಳಿವೆ. ಸಕ್ಕರೆ, ಸಂಸ್ಕರಿತ ಧಾನ್ಯಗಳು (ಮೈದಾ ಇತ್ಯಾದಿ), ಸಂಸ್ಕರಿತ ಖಾದ್ಯತೈಲಗಳು ಮುಂತಾದ ಆಧುನಿಕ ಸಸ್ಯಾಹಾರವೇ ಇಂದಿನ ರೋಗಗಳಿಗೆ ಕಾರಣವಾಗಿದ್ದು, ಅವನ್ನು ವರ್ಜಿಸಬೇಕು ಯಾ ಮಿತಿಗೊಳಿಸಬೇಕು; ಬದಲಿಗೆ, ತರಕಾರಿಗಳು, ಕಾಳುಗಳು, ಇಡೀ ಧಾನ್ಯಗಳು, ಮೀನು, ಮಾಂಸ, ಮೊಟ್ಟೆಗಳನ್ನು ಹೆಚ್ಚಾಗಿ ಸೇವಿಸಬೇಕು ಎಂದು ಈ ಕರಡಿನಲ್ಲಿಯೂ ಹೇಳಲಾಗಿದೆ. ಸಸ್ಯಾಹಾರವೇ ಶ್ರೇಷ್ಠವೆಂದು ರಚ್ಚೆ ಹಿಡಿಯುತ್ತಿರುವವರಿಗೆ ಭಾರತ ಸರಕಾರವೇ ಸತ್ಯದರ್ಶನ ಮಾಡಿಸಿದೆ.

ನಮ್ಮ ದೇಶದ ಮಕ್ಕಳಲ್ಲಿ ಆಧುನಿಕ ರೋಗಗಳು ಹೆಚ್ಚುತ್ತಿರುವುದಕ್ಕೆ ಕೊಬ್ಬು, ಉಪ್ಪು ಹಾಗೂ ಸಕ್ಕರೆಗಳ ಅತಿಸೇವನೆಯೇ ಕಾರಣವೆನ್ನುವುದನ್ನು ಅತ್ಯಂತ ಸರಳವಾಗಿ, ಸುಸ್ಪಷ್ಟವಾಗಿ ಈ ಕರಡಿನಲ್ಲಿ ವಿವರಿಸಲಾಗಿದೆ. ಸಕ್ಕರೆಯಿಂದ ದೇಹಕ್ಕೆ ಯಾವುದೇ ಪ್ರಯೋಜನವಿಲ್ಲ, ಅದರ ಸೇವನೆಗೆ ಸುರಕ್ಷಿತ ಪ್ರಮಾಣವೆಂಬುದೂ ಇಲ್ಲ, ಬೊಜ್ಜು, ಮಧುಮೇಹ ಮುಂತಾದ ರೋಗಗಳಿಗೆ ಸಕ್ಕರೆಯ ಸೇವನೆಯೇ ಕಾರಣ; ಉಪ್ಪಿನ ಅತಿಸೇವನೆಯು ರಕ್ತನಾಳಗಳ ಕಾಯಿಲೆ ಹಾಗೂ ಹೃದ್ರೋಗಗಳನ್ನುಂಟು ಮಾಡಬಹುದು; ಕುಕೀ, ಕ್ರಾಕರ್, ಚಿಪ್ಸ್ ಹಾಗೂ ಕರಿದ ತಿನಿಸುಗಳಲ್ಲಿರುವ ಪರ್ಯಾಪ್ತ ಮೇದೋ ಆಮ್ಲಗಳು ಮತ್ತು ಟ್ರಾನ್ಸ್ ಮೇದೋ ಆಮ್ಲಗಳು ಬೊಜ್ಜು, ಹೃದಯಾಘಾತಗಳಿಗೆ ಕಾರಣವಾಗಬಹುದು; ಕೇಫೀನ್ ಉಳ್ಳ ಶಕ್ತಿದಾಯಕ ಪೇಯಗಳಿಂದ ಸ್ನಾಯು ಹಾಗೂ ನರಗಳ ಸಮಸ್ಯೆಗಳೂ, ನಿರ್ಜಲೀಕರಣವೂ ಉಂಟಾಗಬಹುದು ಎಂದು ಕರಡಿನಲ್ಲಿ ಹೇಳಲಾಗಿದೆ. ಒಟ್ಟಿನಲ್ಲಿ ಈ ಮಾರ್ಗದರ್ಶಿಕೆಯು ಸಂಸ್ಕರಿತ ಸಸ್ಯಾಹಾರವನ್ನಷ್ಟೇ ರೋಗಕಾರಕವೆಂದು ದೂಷಿಸಿ, ಮೀನು, ಮಾಂಸ, ಮೊಟ್ಟೆಗಳನ್ನು ಆರೋಪಮುಕ್ತಗೊಳಿಸಿದೆ. ಸಸ್ಯಾಹಾರವೇ ಶ್ರೇಷ್ಠವೆಂಬ ವ್ಯಸನಕ್ಕೆ ಭಾರತ ಸರಕಾರವೇ ದಿವ್ಯೌಷಧ ನೀಡಿದೆ!

ಮಕ್ಕಳು ರೋಗಕಾರಕ ತಿನಿಸುಗಳನ್ನು ತ್ಯಜಿಸಿ ಪೌಷ್ಠಿಕವಾದ ಆಹಾರವನ್ನು ಸೇವಿಸುವಂತಾಗಲು ಈ ಕರಡಿನಲ್ಲಿ ಹಲವು ಅತ್ಯುತ್ತಮ ಸಲಹೆಗಳನ್ನು ನೀಡಲಾಗಿದೆ. ಸಮತೋಲಿತ ಆಹಾರದ ಬಗ್ಗೆಯೂ, ಆಹಾರದಿಂದ ಉಂಟಾಗಬಲ್ಲ ರೋಗಗಳ ಬಗ್ಗೆಯೂ ಮಕ್ಕಳಿಗೆ ಅರಿವಿಲ್ಲದಿರುವುದರಿಂದ ಆಹಾರದ ಆಯ್ಕೆಯನ್ನು ಅವರಿಗೆ ಬಿಡಬಾರದು; ಸದ್ಗುಣಗಳನ್ನೂ, ರಚನಾತ್ಮಕ ಜೀವನಮೌಲ್ಯಗಳನ್ನೂ ಕಲಿಸಬೇಕಾದ ಶಾಲೆಗಳಲ್ಲಿ ಅನಾರೋಗ್ಯಕರ ಆಹಾರಗಳನ್ನು ಉತ್ತೇಜಿಸಬಾರದು; ಶಾಲಾ ಕ್ಯಾಂಟೀನುಗಳು ವ್ಯಾಪಾರದ ಅಂಗಡಿಗಳಾಗದೆ, ಪರಿಪೂರ್ಣ, ಪೌಷ್ಠಿಕ, ಸುರಕ್ಷಿತ ಹಾಗೂ ಸ್ವಚ್ಛ ಆಹಾರವನ್ನು ಒದಗಿಸುವಂತಾಗಬೇಕು ಎಂದು ಕರಡಿನಲ್ಲಿ ಹೇಳಲಾಗಿದೆ.

ಶಾಲಾ ಕ್ಯಾಂಟೀನುಗಳಲ್ಲಿ ವಿವಿಧ ತಿನಿಸುಗಳನ್ನು ಕೆಂಪು, ಹಳದಿ ಹಾಗೂ ಹಸಿರು ಬಣ್ಣದ ಗುಂಪುಗಳಾಗಿ ವಿಂಗಡಿಸಬೇಕೆಂಬ ವಿನೂತನ ಸಲಹೆಯು ಈ ಕರಡಿನಲ್ಲಿದೆ. ಆರೋಗ್ಯಕ್ಕೆ ಹಾನಿಕರವಾದ ಚಿಪ್ಸ್, ಸಮೋಸ, ಪೂರಿ, ಬತೂರಗಳಂತಹ ಕರಿದ ತಿನಿಸುಗಳು, ಸಕ್ಕರೆಭರಿತ ಪೇಯಗಳು ಮತ್ತು ಸಿಹಿ ತಿನಿಸುಗಳು, ನೂಡಲ್ಸ್, ಪಿಝಾ, ಬರ್ಗರ್ ಗಳಂತಹ ಸಿದ್ಧ ತಿನಿಸುಗಳು ಕೆಂಪು ಗುಂಪಿನಲ್ಲಿರಬೇಕು, ಶಾಲೆಯ 50 ಮೀಟರ್ ವ್ಯಾಪ್ತಿಯಲ್ಲಿ ಅವುಗಳ ಲಭ್ಯತೆಯನ್ನು ನಿಯಂತ್ರಿಸಬೇಕು ಹಾಗೂ ಮಕ್ಕಳು ಅವನ್ನು ತಿನ್ನದಂತೆ ತಡೆಯಬೇಕು; ಹಾಲಿನಿಂದ ತಯಾರಿಸಿದ ಐಸ್ ಕ್ರೀಂ ಇತ್ಯಾದಿ ಸಿಹಿ ತಿನಿಸುಗಳನ್ನು ಹಳದಿ ಗುಂಪಿನಲ್ಲಿಟ್ಟು, ತೀರಾ ಅಪರೂಪಕ್ಕೊಮ್ಮೆ, ಅತ್ಯಲ್ಪವಾಗಿ ತಿನ್ನಗೊಡಬೇಕು; ತರಕಾರಿಗಳು, ಕಾಳುಗಳು, ಇಡೀ ಧಾನ್ಯಗಳು, ತೆಳ್ಳಗಿನ ಮಾಂಸ, ಮೀನು, ಮೊಟ್ಟೆ, ಕಡಿಮೆ ಕೊಬ್ಬಿನ ಹಾಲು ಹಾಗೂ ಹಣ್ಣುಗಳು ಹಸಿರು ಗುಂಪಿನಲ್ಲಿದ್ದು, ಯಾವಾಗಲೂ ಲಭ್ಯವಿರಬೇಕು, ಕನಿಷ್ಠ ಶೇ.80ರಷ್ಟು ಆಹಾರಾಂಶವನ್ನು ಒದಗಿಸಬೇಕು ಎಂದು ಸೂಚಿಸಲಾಗಿದೆ. ಈ ವಿಂಗಡಣೆಯನ್ನು ಶಾಲೆಯ ಕ್ಯಾಂಟೀನುಗಳ ತಿನಿಸುಗಳಿಗಷ್ಟೇ ಅಲ್ಲದೆ, ಮನೆಯಿಂದ ತರುವ ತಿನಿಸುಗಳಿಗೂ ಅನ್ವಯಿಸಬಹುದೆಂದೂ, ಪ್ರಾಥಮಿಕ ಹಂತದಿಂದ ಮೇಲಿನ ಹಂತದವರೆಗೆ, ಹಗಲು ಶಾಲೆಗಳಿಂದ ವಸತಿ ಶಾಲೆಗಳವರೆಗೆ ಎಲ್ಲೆಡೆಯೂ ಇದೇ ನೀತಿಯನ್ನು ಅಳವಡಿಸಿಕೊಳ್ಳಬಹುದೆಂದೂ ಕರಡಿನಲ್ಲಿ ಹೇಳಲಾಗಿದೆ.

ಈ ಸೂತ್ರಗಳ ಪಾಲನೆಯನ್ನು ಖಾತರಿಗೊಳಿಸುವುದಕ್ಕಾಗಿ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನೊಳಗೊಂಡ ಆರೋಗ್ಯ ತಂಡವನ್ನು ಪ್ರತೀ ಶಾಲೆಯಲ್ಲೂ ರಚಿಸಬೇಕೆಂದೂ, ಶಾಲಾ ಪಠ್ಯದಲ್ಲೂ, ಪಠ್ಯೇತರ ಚಟುವಟಿಕೆಗಳಲ್ಲೂ ಈ ಸೂತ್ರಗಳ ಬಗ್ಗೆ ಮಾಹಿತಿಯೊದಗಿಸಬೇಕೆಂದೂ ಕರಡಿನಲ್ಲಿ ಸೂಚಿಸಲಾಗಿದೆ. ರೋಗಕಾರಕ ತಿನಿಸುಗಳ ಜಾಹೀರಾತುಗಳು ಮಕ್ಕಳನ್ನು ಗುರಿಯಾಗಿಸದಂತೆ ನಿರ್ಬಂಧಿಸಬೇಕು, ಅವಕ್ಕೆ ಖ್ಯಾತನಾಮರ ಬೆಂಬಲವನ್ನು ತಡೆಯಬೇಕು ಎಂಬಿತ್ಯಾದಿ ಸಲಹೆಗಳೂ ಕರಡಿನಲ್ಲಿವೆ.

ಜೊತೆಗೆ, ಐದರಿಂದ ಹದಿನೇಳು ವಯಸ್ಸಿನ ಮಕ್ಕಳಿಗೆ, ಪ್ರತಿನಿತ್ಯ ಒಟ್ಟು ಒಂದು ಗಂಟೆಯಷ್ಟಾದರೂ, ಹುರುಪಾದ ದೈಹಿಕ ಚಟುವಟಿಕೆಗಳನ್ನು ಕಡ್ಡಾಯಗೊಳಿಸಬೇಕೆಂದು ಕರಡಿನಲ್ಲಿ ಹೇಳಲಾಗಿದೆ. ಅದಕ್ಕಾಗಿ ಕ್ರಿಕೆಟ್, ಕಾಲ್ಚೆಂಡು, ಬ್ಯಾಡ್ಮಿಂಟನ್, ಟೆನಿಸ್, ಸ್ಕೇಟಿಂಗ್, ಈಜು ಇತ್ಯಾದಿ ಆಟೋಟಗಳನ್ನು ಸೂಚಿಸಲಾಗಿದೆ; ಯೋಗಾಭ್ಯಾಸವನ್ನು ಎಲ್ಲೂ ಪ್ರಸ್ತಾಪಿಸದೆ ಸಂಪೂರ್ಣವಾಗಿ ಕಡೆಗಣಿಸಲಾಗಿದೆ.

ಹೀಗೆ, ರೋಗಕಾರಕವಾದ ಸಂಸ್ಕರಿತ ಸಸ್ಯಾಹಾರವನ್ನು ಕೆಂಪು ಪಟ್ಟಿಗೆ ತಳ್ಳಿ, ಪೌಷ್ಠಿಕವಾದ ಮಾಂಸಾಹಾರಕ್ಕೆ ಹಸಿರು ನಿಶಾನೆ ತೋರಿ, ಉಪಯೋಗವಿಲ್ಲದ ಯೋಗಾಭ್ಯಾಸವನ್ನೂ ಹೊರಗುಳಿಸಿ, ಅತ್ಯಂತ ವೈಜ್ಞಾನಿಕವೂ, ಕ್ರಾಂತಿಕಾರಿಯೂ ಆದ ಮಾರ್ಗದರ್ಶಿಕೆಯನ್ನು ಪ್ರಕಟಿಸಿರುವ ಆಹಾರ ಪ್ರಾಧಿಕಾರವನ್ನು ಅಭಿನಂದಿಸಲೇಬೇಕು. ಆಗಸ್ಟ್ 2012ರಲ್ಲಿ ಸಿದ್ಧಗೊಂಡ ಈ ಮಾರ್ಗದರ್ಶಿಕೆಯನ್ನು ಮಾರ್ಚ್ 2015ರಲ್ಲಿ ದಿಲ್ಲಿ ಉಚ್ಛ ನ್ಯಾಯಾಲಯವು ದೃಢೀಕರಿಸಿ, ಆದಷ್ಟು ಬೇಗನೇ ಅಧಿಕೃತ ನೀತಿಯಾಗಿ ದೇಶದಾದ್ಯಂತ ಜಾರಿಗೊಳಿಸಬೇಕೆಂದು ಆದೇಶಿಸಿತ್ತು. ಅದನ್ನೀಗ ಎಲ್ಲರೂ ಒತ್ತಾಯಿಸಬೇಕಾಗಿದೆ. ಸ್ವತಃ ಪ್ರಧಾನಮಂತ್ರಿಗಳೇ ಮುತುವರ್ಜಿಯಿಂದ ಅದನ್ನು ಅಧಿಕೃತ ನೀತಿಯೆಂದು ಘೋಷಿಸಿ ತಮ್ಮ ಮುತ್ಸದ್ಧಿತನವನ್ನು ಮೆರೆಯಬೇಕಾಗಿದೆ, ದೇಶದ ಎಲ್ಲ ಮಕ್ಕಳೂ, ವಯಸ್ಕರೂ ಪೌಷ್ಠಿಕ ಆಹಾರವನ್ನು ಸೇವಿಸುವಂತೆ ಪ್ರೇರೇಪಿಸಬೇಕಾಗಿದೆ. ಹಾಗೆಯೇ, ಮೀನು, ಮಾಂಸ, ಮೊಟ್ಟೆಗಳ ಸೇವನೆಗೆ ವ್ಯಕ್ತವಾಗುತ್ತಿರುವ ಅಡ್ಡಿ-ಆತಂಕಗಳನ್ನು ನಿವಾರಿಸಲು ಅವರೇ ಕ್ರಮ ಕೈಗೊಳ್ಳಬೇಕಾಗಿದೆ.

ಜಾತಿ, ಮತ ಭೇದವಿಲ್ಲದೆ ದೇಶದ ಎಲ್ಲಾ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳು, ಕಛೇರಿಗಳು, ಉದ್ಯಮಗಳು ಮುಂತಾದೆಡೆ ಕ್ಯಾಂಟೀನುಗಳಲ್ಲೂ, ಭೋಜನಾಲಯಗಳಲ್ಲೂ ತರಕಾರಿ ಹಾಗೂ ಧಾನ್ಯಗಳ ಜೊತೆಗೆ ಮೀನು, ಮಾಂಸ, ಮೊಟ್ಟೆಗಳು ಕಡ್ಡಾಯವಾಗಿ ಲಭ್ಯವಾಗಬೇಕು. ನಮ್ಮ ರಾಜ್ಯವೂ ಸೇರಿದಂತೆ ಎಲ್ಲೆಡೆ ಶಾಲಾ ಬಿಸಿಯೂಟದಲ್ಲಿ ಪ್ರತಿನಿತ್ಯ ಮೊಟ್ಟೆಯನ್ನು ನೀಡಬೇಕು; ಮಾನ್ಯ ಪ್ರಧಾನಮಂತ್ರಿಗಳೇ ಅದನ್ನು ಉದ್ಘಾಟಿಸಿದರೆ ಇನ್ನೂ ಒಳ್ಳೆಯದು. ಸಮಾರಂಭಗಳಲ್ಲಿ ಭೋಜನ ವ್ಯವಸ್ಥೆ ಮಾಡುವಾಗಲೂ ತಿನಿಸುಗಳನ್ನು ಇದೇ ಸೂತ್ರದಂತೆ ವಿಂಗಡಿಸಿಟ್ಟರೆ ಆರೋಗ್ಯಕರ ಆಹಾರವನ್ನು ಇನ್ನಷ್ಟು ಉತ್ತೇಜಿಸಿದಂತಾಗುತ್ತದೆ.

ಈ ಕರಡಿನಲ್ಲಿ ಒಂದೆರಡು ಸಣ್ಣ ಪರಿಷ್ಕರಣೆಗಳನ್ನು ಮಾಡಿದರೆ ಒಳ್ಳೆಯದು. ಈ ಕರಡನ್ನು ಸಿದ್ಧಪಡಿಸಿ ಈಗಾಗಲೇ ಮೂರು ವರ್ಷಗಳಾಗಿರುವುದರಿಂದ, ಆ ನಂತರದ ಅಧ್ಯಯನಗಳನ್ನು ಪರಿಗಣಿಸುವ ಅಗತ್ಯವಿದೆ. ಈ ಕರಡಿನಲ್ಲಿ ಹಣ್ಣುಗಳು, ಹಾಲಿನ ಉತ್ಪನ್ನಗಳು, ಬ್ರೆಡ್, ನಿಂಬೆ ಸೋಡಾಗಳನ್ನು ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಸೇರಿಸಲಾಗಿದೆ; ಆದರೆ ಇವು ಮಕ್ಕಳಿಗೆ ಅಗತ್ಯವಿಲ್ಲ. ಚಮಚದ ಸಕ್ಕರೆಯಲ್ಲೂ, ಹಣ್ಣುಗಳಲ್ಲೂ ಇರುವ ಫ್ರಕ್ಟೋಸ್ ಎಂಬ ಶರ್ಕರದ ಅತಿಸೇವನೆಯೇ ಆಧುನಿಕ ರೋಗಗಳಿಗೆ ಕಾರಣವಾಗಿರಬಹುದೆಂದು ಇತ್ತೀಚಿನ ಹಲವು ಅಧ್ಯಯನಗಳು ಶ್ರುತಪಡಿಸಿವೆ. ಮಕ್ಕಳಲ್ಲಿ ಹಣ್ಣಿನ ರಸದ ಅತಿಸೇವನೆಯು ಬೊಜ್ಜಿಗೆ ಕಾರಣವಾಗುತ್ತದೆಂದೂ, ಅದನ್ನು ಕಡಿತಗೊಳಿಸಿದರೆ ಬೊಜ್ಜನ್ನು ತಡೆಯಬಹುದೆಂದೂ ಅಧ್ಯಯನಗಳು ತೋರಿಸಿವೆ. ಪಶು ಹಾಲಿನ ಸೇವನೆಯಿಂದ ಅಸಹಿಷ್ಣುತೆ, ಅಸ್ತಮಾ, ಮಧುಮೇಹ, ಕರುಳಿನ ಸಮಸ್ಯೆಗಳಾಗಬಹುದೆಂಬ ವರದಿಗಳಿವೆ. ಸಂಸ್ಕರಿತ ಮಾಂಸದಿಂದ ಕೆಲ ರೋಗಗಳುಂಟಾಗಬಹುದೆಂಬ ವರದಿಗಳೂ ಇವೆ.

ಆದ್ದರಿಂದ, ಹಣ್ಣುಗಳು ಹಾಗೂ ಹಾಲಿನ ಉತ್ಪನ್ನಗಳನ್ನು ಹಸಿರಿನ ಬದಲು ಹಳದಿ ಗುಂಪಿನಲ್ಲಿ ಸೇರಿಸಿ, ಅಪರೂಪಕ್ಕೆ ನೀಡುವಂತಾಗಬೇಕು. ತಾಜಾ ತೆಳು ಮಾಂಸವನ್ನು ಹಸಿರು ಗುಂಪಿನಲ್ಲೇ ಇಟ್ಟು, ಸಂಸ್ಕರಿತ ಮಾಂಸವನ್ನು (ಬೇಕನ್, ಸಲಾಮಿ, ಸಾಸೇಜ್) ಹಳದಿ ಗುಂಪಿಗೆ ಸೇರಿಸಬೇಕು. ಐಸ್ ಕ್ರೀಂ ನಂತಹ ಸಿಹಿತಿನಿಸುಗಳು ಹಳದಿಯ ಬದಲು ಕೆಂಪು ಗುಂಪಿಗೆ ಸೇರಿ ವರ್ಜ್ಯವಾಗಬೇಕು. ಗೇರು, ಪಿಸ್ತ, ಬಾದಾಮಿ, ಎಳ್ಳು, ಕುಂಬಳ, ಸೌತೆ ಮುಂತಾದ ಬೀಜಗಳು ಹಸಿರು ಗುಂಪಿಗೆ ಸೇರ್ಪಡೆಯಾಗಬೇಕು. ಮಾಂಸಾಹಾರದ ಜೊತೆ ನಾರುಭರಿತ ತರಕಾರಿಗಳ ಸೇವನೆಯೂ ಅತ್ಯಗತ್ಯವೆಂದು ಒತ್ತಿ ಹೇಳಬೇಕು. ಮಕ್ಕಳು ರೋಗಕಾರಕ ತಿನಿಸುಗಳನ್ನು ಶಾಲೆಗಳಲ್ಲಷ್ಟೇ ಅಲ್ಲ, ಇತರೆಡೆಗಳಲ್ಲೂ ಖರೀದಿಸದಂತೆ ನಿಯಂತ್ರಿಸಬೇಕು.

ಆಹಾರ ಪ್ರಾಧಿಕಾರದ ಈ ಸೂತ್ರಗಳು ಎಲ್ಲ ದೇಶವಾಸಿಗಳಿಗೆ, ಅದರಲ್ಲೂ ಮಕ್ಕಳಿಗೆ, ಹೊಸ ಆಶಾಕಿರಣವಾಗಿವೆ. ಕೇಂದ್ರ ಸರಕಾರದ ಈ ದಿಟ್ಟ ಉಪಕ್ರಮವು ಶ್ರೇಷ್ಠ ಸಸ್ಯಾಹಾರಿಗಳ ಮನದ ಕಣ್ಣು ತೆರೆಸಬೇಕಾಗಿದೆ.

Leave a Reply

Your email address will not be published. Required fields are marked *