ಊಟದ ತಟ್ಟೆಯಲ್ಲಿ ಕಾಂಚಾಣ ನರ್ತನ

ಆರೋಗ್ಯ ಆಶಯ – ವಿಜಯ ಕರ್ನಾಟಕ: ಊಟದ ತಟ್ಟೆಯಲ್ಲಿ ಕಾಂಚಾಣ ನರ್ತನ [ಅಕ್ಟೋಬರ್ 16, 2013, ಬುಧವಾರ] [ನೋಡಿ | ನೋಡಿ]

ಆಹಾರ ಉತ್ಪಾದನೆ ಉದ್ಯಮವಾದಂತೆಲ್ಲ ಹಸಿವು ನೀಗಿಸುವ ಗುರಿ ಕಳೆದುಹೋಗಿ ಲಾಭ-ನಷ್ಟದ ಲೆಕ್ಕಾಚಾರಗಳಷ್ಟೆ ಮೇಲುಗೈ ಸಾಧಿಸಿದವು

‘ಆಹಾರದ ಸುರಕ್ಷತೆಗಾಗಿ ಹಾಗೂ ಪೋಷಣೆಗಾಗಿ ಸುಸ್ಥಿರ ಆಹಾರ ವ್ಯವಸ್ಥೆಗಳು’ ಎಂಬ ಹೊಸ ಉದ್ಘೋಷದೊಂದಿಗೆ ಅಕ್ಟೋಬರ್ 16ರ ವಿಶ್ವ ಆಹಾರ ದಿನಾಚರಣೆ ಮತ್ತೆ ಬಂದಿದೆ. ವಿಶ್ವದೆಲ್ಲೆಡೆ ದಶಕಗಳಿಂದ ಇದನ್ನು ಆಚರಿಸಲಾಗುತ್ತಿದ್ದರೂ ವರ್ಷದಿಂದ ವರ್ಷಕ್ಕೆ ಆಹಾರದ ಪೂರೈಕೆ ಇಳಿಯುತ್ತಲೇ ಇದೆ, ಹಸಿದವರ ಸಂಖ್ಯೆ ಹಾಗೆಯೇ ಉಳಿದಿದೆ. ವರ್ಷಕ್ಕೆ ನಾಲ್ಕು ಕೋಟಿ ಜನ ಸರಿಯಾದ ಊಟವಿಲ್ಲದೆ ಸಾಯುತ್ತಿದ್ದಾರೆ, ಮೂರರಲ್ಲೊಂದು ಮಗು ನ್ಯೂನಪೋಷಣೆಯಿಂದ ನರಳುತ್ತಿದೆ.

ವಿಶ್ವದ ಜನರೆಲ್ಲರಿಗೆ ಸಾಕಾಗುವಷ್ಟು ಆಹಾರವು ಲಭ್ಯವಿಲ್ಲವೇ? ಇದೆ. ಏಳ್ನೂರು ಕೋಟಿ ಹೊಟ್ಟೆಗಳನ್ನು ತುಂಬುವುದಕ್ಕೆ ಸಾಕಾಗುವಷ್ಟು ಧಾನ್ಯಗಳನ್ನು ನಾವು ಬೆಳೆಯುತ್ತಿದ್ದೇವೆ. ಅದರ ಜೊತೆಗೆ ತರಕಾರಿಗಳು, ಬೀಜಗಳು, ಹಣ್ಣುಗಳು, ಮೀನು-ಮಾಂಸ-ಮೊಟ್ಟೆ ಇತ್ಯಾದಿಗಳೂ ಇವೆ. ಹಾಗಿದ್ದರೂ ನೂರು ಕೋಟಿ ಜನರಿಗೆ ಇವು ದಕ್ಕುವುದೇ ಇಲ್ಲ. ಕಳೆದ ವರ್ಷ 70 ಲಕ್ಷ ಟನ್ ಗೋಧಿಯನ್ನೂ, 85 ಲಕ್ಷ ಟನ್ ಅಕ್ಕಿಯನ್ನೂ ರಫ್ತು ಮಾಡಿದ ಭಾರತದಲ್ಲಿ ಪ್ರತಿ ನಿತ್ಯವೂ 30 ಕೋಟಿ ಜನ ಹಸಿವಿನಲ್ಲಿ ಮಲಗುತ್ತಾರೆ, 3000 ಮಕ್ಕಳು ಹಸಿವಿನಿಂದ ಸಾಯುತ್ತಾರೆ. ಅಂದರೆ, ನಾವು ಬೆಳೆಯುತ್ತಿರುವ ಆಹಾರವು ಬೇರೆ ದಾರಿ ಹಿಡಿಯುತ್ತಿದೆ ಎಂದಾಯಿತು.

ಎರಡು ಲಕ್ಷ ವರ್ಷಗಳಷ್ಟು ಹಿಂದೆ ಮಾನವ ಸಂತತಿ ವಿಕಾಸ ಹೊಂದಿದಾಗ ಎಲೆಯಿಂದ ಹಿಡಿದು ಬೀಜದವರೆಗೆ, ಇರುವೆಯಿಂದ ಹಿಡಿದು ಆನೆಯವರೆಗೆ ಪ್ರಕೃತಿದತ್ತವಾದ ಎಲ್ಲವನ್ನೂ ತಿನ್ನಬಲ್ಲ ಸಾಮರ್ಥ್ಯವು ಅವನಿಗೆ ದಕ್ಕಿತ್ತು. ಸುಮಾರು ಹತ್ತು ಸಾವಿರ ವರ್ಷಗಳ ಹಿಂದಿನವರೆಗೂ ಮನುಷ್ಯರು ಕಾಡುಮೇಡುಗಳಲ್ಲಿ ಅಲೆಯುತ್ತಾ ಬಗೆಬಗೆಯ ಸಸ್ಯ-ಮಾಂಸಗಳನ್ನು ತಿನ್ನುತ್ತಿದ್ದರು. ಅಲ್ಲಿಂದೀಚೆಗೆ ಶರಾಬಿನ ಆಸೆಗಾಗಿ ಧಾನ್ಯಗಳನ್ನು ಬೆಳೆಯತೊಡಗಿ, ಅದೇ ಮುಖ್ಯ ಆಹಾರವಾಗಿಬಿಟ್ಟಿತು. ಜೊತೆಗೆ ಕೆಲವೊಂದು ಪ್ರಾಣಿ-ಪಕ್ಷಿಗಳನ್ನು ಸಾಕಿ ಆಹಾರಕ್ಕಾಗಿ ಬಳಸುವ ಕ್ರಮವೂ ಆರಂಭಗೊಂಡಿತು. ಹೀಗೆ ಕೃಷಿ ಮತ್ತು  ನಾಗರಿಕತೆ ಹುಟ್ಟಿಕೊಂಡಲ್ಲಿಂದಲೇ ಆಹಾರದ ಸಂಕಟವೂ ಆರಂಭಗೊಂಡಿತು. ವೈವಿಧ್ಯತೆ ಕಡಿಮೆಯಾಗಿ ಸಾಕಿ-ಬೆಳೆಸಿದ್ದನ್ನಷ್ಟೇ ತಿನ್ನುವುದಾಯಿತು.

ಬೇಸಾಯದೊಂದಿಗೆ ಆಸ್ತಿ-ರಾಜ್ಯಗಳು ಹುಟ್ಟಿಕೊಂಡವು, ದುಡಿಯುವವರು ಮತ್ತು ದುಡಿಸುವವರು ಬೇರೆಯಾದರು. ದುಡಿದವನು ಬೆಳೆಸಿದ ಆಹಾರವು ದುಡಿಸಿದವನ ಸುಪರ್ದಿಗೆ ಸೇರಿತು; ದುಡಿಸಿದವನ ಹೊಟ್ಟೆ ಸದಾ ತುಂಬಿದ್ದರೆ, ದುಡಿದವನು ತಾನೇ ಬೆಳೆದ ಅನ್ನಕ್ಕಾಗಿ ಬೇಡಬೇಕಾದ ಅವಸ್ಥೆಯುಂಟಾಯಿತು. ಮುಂದೆ ಕೃಷಿ ಭೂಮಿಗಳೂ, ಧಾನ್ಯಗಳ ಉಗ್ರಾಣಗಳೂ ಜಮೀನ್ದಾರರು ಹಾಗೂ ರಾಜರುಗಳ ಪಾಲಾದವು. ಇವರೆಲ್ಲರೂ ಹಸಿದವರ ಸಿಟ್ಟನ್ನು ನೇರವಾಗಿ ಎದುರಿಸಬೇಕಾಗಿದ್ದುದರಿಂದ ಆಹಾರದ ವಿತರಣೆಯಲ್ಲಿ ಹೆಚ್ಚು ಮೋಸ ಮಾಡುವುದಾಗುತ್ತಿರಲಿಲ್ಲ.

ಬ್ರಿಟಿಷ್ ಚಕ್ರಾಧಿಪತ್ಯವು ಸೂರ್ಯ ಮುಳುಗದ ತನ್ನ ಸಾಮ್ರಾಜ್ಯದುದ್ದಕ್ಕೂ ಆಹಾರವಸ್ತುಗಳನ್ನು ಬೆಳೆದು ಬ್ರಿಟಿಷ್ ಪ್ರಜೆಗಳಿಗಾಗಿಯೂ, ಇತರೆಡೆ ಮಾರುವುದಕ್ಕಾಗಿಯೂ ಹೊತ್ತೊಯ್ಯುತ್ತಿತ್ತು. ಇತ್ತ ವಸಾಹತುಗಳಲ್ಲಿ ದುಡಿಯುತ್ತಿದ್ದವರು ತಮ್ಮ ಹೊಟ್ಟೆ ತುಂಬಿಸಲು ಬ್ರಿಟಿಷರೆದುರು ಕೈಯೊಡ್ಡಬೇಕಾಗಿತ್ತು. ಆ ಮೂರು ಶತಮಾನಗಳಲ್ಲಿ ಮೂರು ಭೀಕರ ಕ್ಷಾಮಗಳಾಗಿ, ಕೋಟಿಗಟ್ಟಲೆ ಭಾರತೀಯರು ಊಟಕ್ಕಿಲ್ಲದೆ ಸತ್ತರು, ಆದರೆ ಆಹಾರದ ರಫ್ತು ಮಾತ್ರ ನಿಲ್ಲಲಿಲ್ಲ: 1875-1900ರ ನಡುವೆ ಮೂರು ಕೋಟಿ ಜನ ಹಸಿವಿನಿಂದ ಸತ್ತರೆ, ಆಹಾರದ ರಫ್ತಿನ ಪ್ರಮಾಣವು ವರ್ಷಕ್ಕೆ ಮೂವತ್ತು ಲಕ್ಷ ಟನ್ ನಿಂದ ಒಂದು ಕೋಟಿ ಟನ್ನಿಗೇರಿತು.

ಹೊಸ ತಂತ್ರಜ್ಞಾನಗಳು, ಹೊಸ ರಾಜಕೀಯ-ಆರ್ಥಿಕ ವ್ಯವಸ್ಥೆಗಳು ನೆಲೆಗೊಂಡಂತೆ ಆಹಾರದ ಉತ್ಪಾದನೆ ಹಾಗೂ ವಿತರಣೆಗಳು ದುಡಿಯುವವರ ಕೈಗಳಿಂದ ಇನ್ನಷ್ಟು ದೂರವಾದವು. ಆಹಾರದ ಉತ್ಪಾದನೆಯು ಬೃಹತ್ ಉದ್ಯಮಗಳ ಪಾಲಾಯಿತು, ಆಹಾರವು ಜನರ ತಟ್ಟೆಗಳಿಂದ ಖಾಸಗಿ ಗೋದಾಮುಗಳನ್ನು ಸೇರಿತು, ಹೊಟ್ಟೆಗಳು ತುಂಬುವ ಬದಲು ಆರೇಳು ಬಹುರಾಷ್ಟ್ರೀಯ ಕಂಪೆನಿಗಳ ತಿಜೋರಿಗಳು ತುಂಬತೊಡಗಿದವು. ಆಹಾರವು ಬದುಕಿನ ಅನಿವಾರ್ಯತೆಗಿಂತಲೂ ಕಂಪೆನಿಗಳ ಲಾಭದ ಸರಕಾಯಿತು. ಈ ಲಾಭವನ್ನು ಹೆಚ್ಚಿಸುವುದಕ್ಕಾಗಿ ಆಹಾರದ ಉತ್ಪಾದನೆ ಹಾಗೂ ಸಂಸ್ಕರಣೆಗಳ ತಂತ್ರಜ್ಞಾನಗಳು ಅಭಿವೃದ್ಧಿಗೊಂಡವು. ಹಿಂದೆ ನೆಲದ ಸಾರವನ್ನು ಕಾಪಾಡುವುದಕ್ಕೆ ಬೆಳೆಗಳ ಆವರ್ತನೆಯಾಗುತ್ತಿತ್ತು. ಕೃತಕ ರಸಗೊಬ್ಬರಗಳು ಬಂದ ಬಳಿಕ ಬೆಳೆದದ್ದನ್ನೇ ಬೆಳೆಯುವುದಾಯಿತು. ಅಲ್ಲದೆ ಕೃಷಿಯು ನೈಸರ್ಗಿಕ ಅನಿಲ ಹಾಗೂ ತೈಲಗಳ ವ್ಯವಹಾರದೊಂದಿಗೆ ತಳುಕು ಹಾಕಿ ತೈಲದ ಬೆಲೆಯು ಆಹಾರದ ಬೆಲೆಗೂ ತಟ್ಟಿತು. ಮಣ್ಣಿನಲ್ಲಿ ಕೃತಕ ಸಾರಜನಕ ತುಂಬಿದಂತೆ ಪೈರಿನ ಶಕ್ತಿಗುಂದಿ ಕೀಟಗಳ ಕಾಟ ಹೆಚ್ಚಿತು; ಹೀಗೆ ಕೀಟನಾಶಕಗಳು ನಮ್ಮ ಆಹಾರದೊಳಕ್ಕೆ ಹೊಕ್ಕವು. ರೈತರು ರಸಗೊಬ್ಬರ ಮತ್ತು ಕೀಟನಾಶಕ ತಯಾರಕರ ದಾಸರಾದರು. ಉತ್ಪಾದನೆ ಹೆಚ್ಚಿತು, ಊಟ ಕೆಟ್ಟಿತು.

ದೈತ್ಯ ಕಂಪೆನಿಗಳ ದಾಹ ಇಷ್ಟಕ್ಕೇ ತೀರಲಿಲ್ಲ. ಹೆಚ್ಚು ಇಳುವರಿಯ ತಳಿಗಳು ಬಂದವು. ಕಳೆನಾಶಕಗಳನ್ನು ಸಹಿಸಿಕೊಳ್ಳುವ, ಕೀಟಗಳನ್ನು ನಿರೋಧಿಸುವ, ಮತ್ತೆ ಮೊಳೆಯದ ಅಂತಕ ಬೀಜಗಳ ಕುಲಾಂತರಿ ಸಸ್ಯಗಳು ಬಂದವು. ರೈತರ ದಾಸ್ಯ ಇನ್ನಷ್ಟು ಕಠಿಣವಾಗಿ ಬೀಜಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದೇ ಅಪರಾಧವಾಯಿತು. ಶತಮಾನಗಳಿಂದ ಮನುಕುಲದ ಬಳಿಯಿದ್ದ ಬೀಜ ವೈವಿಧ್ಯತೆ ನಶಿಸತೊಡಗಿ ಮೊನ್ಸಾಂಟೋ, ಕಾರ್ಗಿಲ್ ಮುಂತಾದ ದೈತ್ಯ ಕಂಪೆನಿಗಳ ಏಕಸ್ವಾಮ್ಯತೆ ಮೆರೆಯತೊಡಗಿತು. ಒಂದೊಂದೂರಿನ ಒಂದೊಂದು ಆಹಾರದ ಬದಲು ವಿಶ್ವದೆಲ್ಲೆಡೆ ಒಂದೇ ಆಹಾರವೆಂಬ ದುರ್ಗತಿ ಮೂಡಿತು.

ಆಹಾರದ ಉತ್ಪಾದನೆ ಹೆಚ್ಚಿದಂತೆ ವ್ಯಾಪಾರವೂ ಹೆಚ್ಚಬೇಕಲ್ಲ? ಆದರೆ ಜನಸಂಖ್ಯೆಯಾಗಲೀ, ತಿನ್ನುವ ಪ್ರಮಾಣವಾಗಲೀ ಹಾಗೆಲ್ಲ ಹೆಚ್ಚವು. ಇನ್ನು ದುಡ್ಡಿಲ್ಲದವರಿಗೆ ಆಹಾರವನ್ನು ಒದಗಿಸಿದರೆ ಲಾಭವಾಗದು. ಹಾಗಾಗಿ ಹೇರಳವಾಗಿ ಬೆಳೆಯುವ ಜೋಳವನ್ನು ಮಾಂಸಕ್ಕಾಗಿ ಸಾಕುವ ಪ್ರಾಣಿಗಳಿಗೆ ತಿನ್ನಿಸಲಾರಂಭಿಸಲಾಯಿತು. ಅಡ್ಡಾಡಿ ಹುಲ್ಲು ಮೇಯುವ ಪಶುಗಳು ಬಲಿಯುವುದಕ್ಕೆ ನಾಲ್ಕು ವರ್ಷಗಳಾಗುವಲ್ಲಿ ಕೂಡಿಹಾಕಿ ಜೋಳ ಮುಕ್ಕಿಸಿದವುಗಳು ಒಂದೂವರೆ ವರ್ಷಗಳಲ್ಲೇ ಬಲಿಯುವುದರಿಂದ ಮಾಂಸದ ವ್ಯಾಪಾರಕ್ಕೂ ಒಳಿತಾಯಿತು! ಧಾನ್ಯಗಳನ್ನು ತಿಂದ ಪಶುಗಳಿಗೆ ಸೋಂಕು ಹೆಚ್ಚುವುದರಿಂದ ಪ್ರತಿಜೈವಿಕಗಳ ಬಳಕೆಯೂ ಹೆಚ್ಚಿತು, ಅದರಲ್ಲೂ ಲಾಭ ಹುಟ್ಟಿತು. ಆಕಳು, ಹಂದಿಗಳು, ಕೋಳಿಗಳು ಹಾಗೂ ಕೆಲಬಗೆಯ ಮೀನುಗಳಿಗೆ ಇಂದು ಜೋಳ, ಸೋಯಾ ಮುಂತಾದ ಧಾನ್ಯಗಳನ್ನು ಆಹಾರವಾಗಿ ನೀಡಲಾಗುತ್ತಿದೆ. ಬ್ರೆಜಿಲಿನ ಅಮೆಜಾನ್ ಕಾಡುಗಳನ್ನು ಕತ್ತರಿಸಿ, ಅಲ್ಲಿ ಬೆಳೆದ ಸೋಯಾವನ್ನು ಚೀನಾ ಹಾಗೂ ಜಪಾನಿನ ಕೋಳಿಗಳಿಗಾಗಿ ರಫ್ತು ಮಾಡಲಾಗುತ್ತಿದೆ.

ವಾಹನಗಳ ಸಂಖ್ಯೆ ಹೆಚ್ಚಿ ತೈಲ ದುಬಾರಿಯಾದಂತೆ ಬದಲಿ ಇಂಧನವಾಗಿ ಜೋಳದಿಂದ ತಯಾರಿಸಿದ ಎಥನಾಲ್ ಬಳಕೆಗೆ ಬಂತು. ಹೀಗೆ ಆಹಾರದ ದೊಡ್ಡ ಪಾಲು ಸಾಕು ಪ್ರಾಣಿ-ಪಕ್ಷಿಗಳಿಗೂ, ಜೀವವಿಲ್ಲದ ವಾಹನಗಳಿಗೂ ಹಂಚಲ್ಪಟ್ಟಿತು. ಶ್ರೀಮಂತನೊಬ್ಬನ ಕಾರಿಗೆ ಒಮ್ಮೆ ತುಂಬುವ ಇಥನಾಲ್ ಗೆ ಬೇಕಾಗುವ ಜೋಳವು ಒಬ್ಬ ಬಡವನ ಹೊಟ್ಟೆಗೆ ಇಡೀ ವರ್ಷದ ಆಹಾರವಾಗಬಲ್ಲದು ಎಂದರೆ ಈ ವ್ಯವಸ್ಥೆಯ ಕ್ರೌರ್ಯವು ಸ್ಪಷ್ಟವಾಗುತ್ತದೆ.

ಆಹಾರ ಸಂಸ್ಕರಣೆಯೂ ದೊಡ್ಡ ಉದ್ಯಮವಾಗಿ ಬೆಳೆದಿದ್ದು ನಿಸರ್ಗದತ್ತ ಆಹಾರವೇನೆನ್ನುವುದು ನಮಗೆ ಮರೆತೇ ಹೋಗುವಂತಾಗಿದೆ. ಗೋಧಿ, ಜೋಳ ಹಾಗೂ ಸೋಯಾಗಳ ಸಿಪ್ಪೆಯಿಂದ ತಿರುಳಿನವರೆಗೆ ಎಲ್ಲವನ್ನೂ ಹಿಂಡಿ ಹಿಪ್ಪೆ ಮಾಡಿ ಸಕ್ಕರೆ, ಪಿಷ್ಠ ಹಾಗೂ ಎಣ್ಣೆಗಳನ್ನು ಬೇರ್ಪಡಿಸಿ, ಅತ್ತಿತ್ತ ಬೆರೆಸಿ, ಆಕರ್ಷಕ ಪೊಟ್ಟಣಗಳಲ್ಲಿರಿಸಿ ಅದನ್ನೇ ಆಹಾರವೆಂದು ಮಾರಲಾಗುತ್ತಿದೆ; ಎರಡು ರೂಪಾಯಿಯ ಜೋಳದಿಂದ ಇನ್ನೂರು ರೂಪಾಯಿಯ ಉತ್ಪನ್ನಗಳಾಗುತ್ತಿವೆ. ಇವುಗಳನ್ನು ತಿನ್ನುವವರನ್ನೂ ಇದೇ ದೈತ್ಯ ಕಂಪೆನಿಗಳು ಸಿದ್ಧ ಪಡಿಸುತ್ತವೆ. ಆಹಾರದ ಉತ್ಪಾದನೆ, ಶೇಖರಣೆ, ಸಂಸ್ಕರಣೆ ಹಾಗೂ ಮಾರಾಟಗಳೆಲ್ಲವೂ ಆರೇಳು ದೈತ್ಯ ಕಂಪೆನಿಗಳ ಅಧೀನವಾಗಿ, ಸಣ್ಣ ಕೃಷಿಕರು ತಮ್ಮ ಜಮೀನುಗಳನ್ನು ತೊರೆದು ನಗರಗಳ ಕೊಳೆಗೇರಿಗಳಿಗೆ ವಲಸೆ ಹೋಗುವಂತಾಗಿದೆ. ಹೀಗೆ ಗುಳೆ ಹೋದ ರೈತರು ಅಗ್ಗವಾಗಿ ದಿನವಿಡೀ ದುಡಿಯುತ್ತಾ, ಊಟಕ್ಕೂ ಸಮಯವಿಲ್ಲದೆ ಸಂಸ್ಕರಿತ ಬ್ರೆಡ್ಡು-ಬಿಸ್ಕತ್ತುಗಳನ್ನು ತಿಂದು ಬದುಕುವಂತಾಗಿದೆ. ಅದರಿಂದಾಗಿ ಬೊಜ್ಜು, ಮಧುಮೇಹ, ಹೃದ್ರೋಗ, ಕ್ಯಾನ್ಸರ್ ಮುಂತಾದ ಕಾಯಿಲೆಗಳೆಲ್ಲವೂ ವಿಪರೀತವಾಗುತ್ತಿದ್ದು, ದೈತ್ಯ ಕಂಪೆನಿಗಳಿಗೆ ಇನ್ನಷ್ಟು ಲಾಭವಾಗುತ್ತಿದೆ.

ಆಹಾರದ ಈ ಬಿಕ್ಕಟ್ಟಿನಿಂದ ವಿಮೋಚಿತರಾಗಲು ಪರಂಪರಾಗತ ಆಹಾರ ವ್ಯವಸ್ಥೆಯತ್ತ ಹೊರಳುವುದೊಂದೇ ದಾರಿಯಾಗಿದೆ. ತಮ್ಮ ಪರಂಪರಾಗತ ಆಹಾರವನ್ನು ಬಿಟ್ಟುಕೊಡದಿರುವ ಅದೆಷ್ಟೋ ಬುಡಕಟ್ಟುಗಳು ಈ ಕಷ್ಟಗಳಿಂದ ತಪ್ಪಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಇಂದು ವಿಶ್ವದ ಮೂಲೆ ಮೂಲೆಗಳಲ್ಲಿ ರೈತ ಸಂಘಟನೆಗಳು ಆಹಾರ ಸುರಕ್ಷತೆಯ ಬದಲಿಗೆ ಆಹಾರದ ಸಾರ್ವಭೌಮತೆಯ ಹಕ್ಕೊತ್ತಾಯಿಸತೊಡಗಿವೆ. ತಿನ್ನುವುದಕ್ಕೆಂದು ಏನನ್ನೋ ಒದಗಿಸಿದರಾಗದು, ನಮ್ಮ ಆಹಾರವೇನೆಂದು ನಿರ್ಧರಿಸುವ ಸ್ವಾತಂತ್ರ್ಯ ನಮಗೇ ಇರಬೇಕು. ಭೂ ಒಡೆತನ, ಕೃಷಿಗೆ ಅಗತ್ಯವಾದ ನೀರು ಮತ್ತಿತರ ಸಂಪನ್ಮೂಲಗಳ ಒದಗಣೆ,  ಕೃಷಿಸಂಬಂಧಿ ನೀತಿನಿರೂಪಣೆಯಲ್ಲಿ ಭಾಗೀದಾರಿಕೆಗಳಿಗಾಗಿ ಹಾಗೂ ಉದ್ಯಮಶಾಹಿಯಿಂದ ಪರಿಸರ ವಿನಾಶವನ್ನು ತಡೆಯುವುದಕ್ಕಾಗಿ ಹೋರಾಟಗಳು ಬಲಗೊಳ್ಳುತ್ತಿವೆ. ವಿವೇಕಹೀನವಾದ, ಮಾನವ ವಿರೋಧಿಯಾದ ಪ್ರಸಕ್ತ ವ್ಯವಸ್ಥೆಯು ಕೊನೆಗೊಂಡು ನಮ್ಮ ಪಕ್ಕದ ಹೊಲದಲ್ಲಿ ನಮ್ಮೂರಿನ ಬೀಜಗಳಿಂದ ನಮಗೆ ಬೇಕಾದ ಧಾನ್ಯಗಳನ್ನೂ, ನಮಗೆ ಬೇಕಾದ ಮೀನು-ಪ್ರಾಣಿ-ಪಕ್ಷಿಗಳನ್ನೂ ಸಾಕಿ-ಬೆಳೆಸಿ ನಮ್ಮ ಆಹಾರಕ್ಕಾಗಿ ಬಳಸಿಕೊಳ್ಳುವ ಸಾರ್ವಭೌಮ ಹಕ್ಕು ನಮಗೆ ದೊರೆಯಬೇಕು.

Leave a Reply

Your email address will not be published. Required fields are marked *