ಲಿಕ್ಕರ್ ಕುಡಿಯದೆ ಲಿವರ್ ಕೆಡುವುದೇ?

ಆರೋಗ್ಯ ಆಶಯ – ವಿಜಯ ಕರ್ನಾಟಕ: ಲಿಕ್ಕರ್ ಕುಡಿಯದೆ ಲಿವರ್ ಕೆಡುವುದೇ? [ಜೂನ್ 12, 2013, ಬುಧವಾರ] [ನೋಡಿ | ನೋಡಿ]

ನಮ್ಮ ನಿತ್ಯಾಹಾರವೇ ಶರಾಬಿನಂತೆ ವರ್ತಿಸಿ ಯಕೃತ್ತಿನ ಕಾಯಿಲೆಗೆ ಕಾರಣವಾಗಬಹುದು

ಯಕೃತ್ತು ಕಮರಿ ಹೋಗಿ, ಗಂಭೀರ ಸಮಸ್ಯೆಗಳಿಗೆ ತುತ್ತಾಗಿದ್ದ ಮಧ್ಯವಯಸ್ಕರೊಬ್ಬರು ದೊಡ್ಡ ಆಸ್ಪತ್ರೆಯ ತಜ್ಞ ವೈದ್ಯರೊಬ್ಬರ ಬಳಿ ಹೋಗಿದ್ದರು. ‘ನೀವು ಶರಾಬು ಕುಡೀತಿದ್ರಾ?’ ಎನ್ನುವುದು ವೈದ್ಯರ ಮೊದಲ ಪ್ರಶ್ನೆಯಾಗಿತ್ತು. “ಇಲ್ಲ”. “ಹಾಗಾದರೆ ನಿಮ್ಮ ಲಿವರ್ ಹೀಗೇಕಾಯ್ತು?” “ನನಗೇನು ಗೊತ್ತು ಡಾಕ್ಟ್ರೇ? ನೀವೇ ಹೇಳ್ಬೇಕು”. “ಇಲ್ಲ, ನೀವು ಸುಳ್ಳು ಹೇಳ್ತಿದ್ದೀರಿ, ಕುಡಿಯದೇ ಈ ರೋಗ ಬರೋದೇ ಇಲ್ಲ, ನೀವು ಕುಡಿದಿರಲೇ ಬೇಕು”. ಶರಾಬು ಕುಡಿಯದೆಯೂ ರೋಗಿಯ ಯಕೃತ್ತು ಕೆಟ್ಟಿತ್ತಾದರೂ, ಹೇಗೆನ್ನುವುದಕ್ಕೆ ಆ ವೈದ್ಯರಲ್ಲಿ ಉತ್ತರವಿರಲಿಲ್ಲ.

ಯಕೃತ್ತಿನ ಹಲವು ಗಂಭೀರ ಸಮಸ್ಯೆಗಳಿಗೆ ಅತಿಯಾದ ಮದ್ಯಪಾನ ಹಾಗೂ ಹೆಪಟೈಟಿಸ್ ಬಿ ಅಥವಾ ಸಿ ಎಂಬ  ಸೋಂಕುಗಳೇ ಮುಖ್ಯವಾದ ಕಾರಣಗಳೆನ್ನುವುದು ಸಾಮಾನ್ಯವಾದ  ತಿಳಿವಳಿಕೆಯಾಗಿದೆ. ಮದ್ಯಪಾನಿಗಳ ಯಕೃತ್ತಿನಲ್ಲಿ ನಿಧಾನವಾಗಿ ಕೊಬ್ಬು ತುಂಬಿಕೊಳ್ಳುತ್ತದೆ, ಅದರಿಂದುಂಟಾಗುವ ಉರಿಯೂತದಿಂದ ಯಕೃತ್ತು ಕ್ರಮೇಣವಾಗಿ ಕ್ಷಯಿಸಿ ಸಣ್ಣಗಾಗುತ್ತದೆ ಹಾಗೂ ಅಪರೂಪಕ್ಕೊಮ್ಮೆ ಕ್ಯಾನ್ಸರ್ ಕೂಡಾ ಬೆಳೆಯುತ್ತದೆ. ಕೊನೆಗೆ ಯಕೃತ್ತಿನ ವೈಫಲ್ಯದಿಂದಾಗಿ ಸಾವು ಸಂಭವಿಸುತ್ತದೆ. ಆದರೆ ಮದ್ಯಪಾನ ಮಾಡದಿರುವವರಲ್ಲೂ, ಹೆಪಟೈಟಿಸ್ ಸೋಂಕಿಲ್ಲದವರಲ್ಲೂ ಯಕೃತ್ತಿನ ಈ ಕಾಯಿಲೆಗಳು ಹೆಚ್ಚುತ್ತಿರುವುದನ್ನು ಇತ್ತೀಚಿನ ವರ್ಷಗಳಲ್ಲಿ ಗುರುತಿಸಲಾಗಿದ್ದು, ಮಕ್ಕಳು ಹಾಗೂ ಹದಿಹರೆಯದವರಲ್ಲೂ ಈ ತೊಂದರೆಗಳು ಕಂಡುಬರುತ್ತಿರುವುದು ಆತಂಕಕ್ಕೆ ಕಾರಣವಾಗಿವೆ.

ಮದ್ಯ ಸೇವಿಸದೆಯೂ ಯಕೃತ್ತಿನಲ್ಲಿ ಕೊಬ್ಬು ತುಂಬುವ ಸಮಸ್ಯೆಯು ಪಾಶ್ಚಿಮಾತ್ಯ ದೇಶಗಳಲ್ಲಿ ಹಾಗೂ ನಮ್ಮ ಮಹಾನಗರಗಳಲ್ಲಿ 20-30% ಜನರನ್ನು ಬಾಧಿಸುತ್ತಿದೆ. ಅಂಥವರಲ್ಲಿ  ಶೇ. 20-30 ಮಂದಿ ಯಕೃತ್ತಿನ ಉರಿಯೂತಕ್ಕೀಡಾದರೆ, 1-2% ಮಂದಿ ಯಕೃತ್ತಿನ ಕ್ಷಯಿಸುವಿಕೆ ಹಾಗೂ ಕ್ಯಾನ್ಸರ್ ಗಳಿಗೆ ತುತ್ತಾಗುತ್ತಾರೆ. ಹಾಗಾದರೆ ಒಂದು ಕೋಟಿಯಷ್ಟು ಜನಸಂಖ್ಯೆಯುಳ್ಳ ಬೆಂಗಳೂರು ನಗರದಲ್ಲಿ ಅದೆಷ್ಟು ಜನ ಮದ್ಯ ಸೇವಿಸದೆಯೂ ಯಕೃತ್ತಿನ ರೋಗಗಳಿಗೆ ತುತ್ತಾಗುತ್ತಿದ್ದಾರೆಂದು ನೀವೇ ಲೆಕ್ಕ ಹಾಕಿಕೊಳ್ಳಬಹುದು. ಬೊಜ್ಜು ದೇಹವುಳ್ಳವರಲ್ಲಿ, ರಕ್ತದಲ್ಲಿ ಮೇದಸ್ಸಿನಂಶ (ಟ್ರೈಗ್ಲಿಸರೈಡ್) ಹೆಚ್ಚಿರುವವರಲ್ಲಿ, ಮಧುಮೇಹವುಳ್ಳವರಲ್ಲಿ ಹಾಗೂ ಹೃದಯದ ರಕ್ತನಾಳಗಳ ಕಾಯಿಲೆಯುಳ್ಳವರಲ್ಲಿ 50-90% ಮಂದಿ ಯಕೃತ್ತಿನಲ್ಲಿ ಕೊಬ್ಬನ್ನು ಹೊಂದಿರುತ್ತಾರೆ. ಸಾಮಾನ್ಯ ಮಕ್ಕಳಲ್ಲಿ ಶೇ. 3-10ರಷ್ಟು ಹಾಗೂ ಬೊಜ್ಜಿರುವ ಮಕ್ಕಳಲ್ಲಿ ಶೇ. 40-70ರಷ್ಟು ಯಕೃತ್ತಿನಲ್ಲಿ ಕೊಬ್ಬನ್ನು ಹೊಂದಿರುತ್ತಾರೆ.

ಶರಾಬು ಸೇವಿಸದ ಇಷ್ಟೊಂದು ಜನರಲ್ಲಿ, ಅದರಲ್ಲೂ ಮಕ್ಕಳಲ್ಲಿ, ಯಕೃತ್ತು ಕೆಡುವುದೇಕೆ? ಶರಾಬಿನ ಮೂಲವನ್ನು ಅರಿಯಲೆತ್ನಿಸಿದರೆ ಇದಕ್ಕೆ ಉತ್ತರ ದೊರೆಯುತ್ತದೆ:ಹಣ್ಣುಗಳಲ್ಲಿರುವ ಫ್ರಕ್ಟೋಸ್ ಅಥವಾ ಧಾನ್ಯಗಳಲ್ಲಿರುವ ಗ್ಲೂಕೋಸ್ ಜೊತೆ ಯೀಸ್ಟ್ ಎಂಬ ಸೂಕ್ಷ್ಮ ಜೀವಿಗಳನ್ನು ಬೆರೆಸಿ ಹುದುಗೆಬ್ಬಿಸಿದಾಗ ಇಥೈಲ್ ಆಲ್ಕಹಾಲ್ ಅಥವಾ ಮದ್ಯಸಾರವು ಉತ್ಪಾದನೆಯಾಗುತ್ತದೆ – ಕಬ್ಬಿನ ರಸ ಅಥವಾ ಕಾಕಂಬಿಯಿಂದ ಸಾರಾಯಿ, ರಂ; ದ್ರಾಕ್ಷಿಯಿಂದ ವೈನ್, ಬ್ರಾಂದಿ; ಗೇರುಹಣ್ಣಿನಿಂದ ಫೆನ್ನಿ; ತಾಳೆಹಣ್ಣಿನಿಂದ ಕಳ್ಳು; ಗೋಧಿ, ಅಕ್ಕಿ, ಜೋಳ, ರೈ, ಬಾರ್ಲಿ ಇತ್ಯಾದಿ ಧಾನ್ಯಗಳಿಂದ ಬಿಯರ್, ವಿಸ್ಕಿ, ಜಿನ್; ಬಟಾಟೆಯಿಂದ ವೋಡ್ಕಾ ಇತ್ಯಾದಿ.

ಇನ್ನೊಂದಷ್ಟು ಕೆದಕಿದರೆ ನಮ್ಮ ನಾಗರಿಕತೆಯ ಮೂಲದಲ್ಲೇ ಶರಾಬಿನ ಘಾಟು ಹೊಡೆಯುತ್ತದೆ! ನಮ್ಮ ಪೂರ್ವಜರಾದ ವಾನರರೂ ಸುರೆಯ ಬೆನ್ನು ಹತ್ತುವವರೇ! ನೆಲಕ್ಕೆ ಬಿದ್ದ ಹಣ್ಣುಗಳಿಗೆ ಮಣ್ಣಿನಲ್ಲಿರುವ ಯೀಸ್ಟ್ ಗಳು ಸೇರಿದಾಗ ಹುಟ್ಟುವ ಶರಾಬನ್ನು ನೆಕ್ಕಿದ ವಾನರರಿಗೂ, ಆದಿಮಾನವರಿಗೂ ಅದರ ನಶೆಯ ಅನುಭವವಿತ್ತು. ಅಂತಲ್ಲಿ, ಕೆಲ ಧಾನ್ಯಗಳು ಬಿದ್ದು ಕೊಳೆತಲ್ಲೂ ಮದ್ಯ ಹುಟ್ಟುವುದು ತಿಳಿಯಿತು. ಸುಮಾರು 13000 ವರ್ಷಗಳ ಹಿಂದೆ ಪೂರ್ವ ಮೆಡಿಟರೇನಿಯನ್ ಪ್ರದೇಶದಲ್ಲಿ ವಾಸಿಸುತ್ತಿದ್ದ ನತೂಫ್ ಪಂಗಡದ ಜನರು ಅಂತಹಾ ಧಾನ್ಯಗಳನ್ನು ಬೆಳೆದು ತಾವೇ ಮದ್ಯವನ್ನು ತಯಾರಿಸಲಾರಂಭಿಸಿದರಂತೆ. ಅಲ್ಲೂ, ಚೀನಾ, ಸಿಂಧೂ ಕಣಿವೆ ಮುಂತಾದೆಡೆಗಳಲ್ಲೂ ಹೀಗೆ ಆರಂಭಗೊಂಡ ಧಾನ್ಯಗಳ ಬೇಸಾಯದೊಂದಿಗೆ ನಾಗರಿಕತೆ ಬೆಳೆಯಿತು, ಕಾಲಕ್ರಮೇಣ ಆ ಧಾನ್ಯಗಳೇ ನಮ್ಮ ಮುಖ್ಯ ಆಹಾರಗಳಾಗಿಬಿಟ್ಟವು, ಇಂದಿಗೂ ನಾವು ಅವನ್ನೇ ತಿನ್ನುತ್ತಿದ್ದೇವೆ.

ಧಾನ್ಯಗಳ ಗ್ಲೂಕೋಸ್ ನಮ್ಮ ಪ್ರಮುಖ ಆಹಾರವಾದುದರ ಜೊತೆಗೆ, ನಮ್ಮ ಫ್ರಕ್ಟೋಸ್ ಸೇವನೆಯೂ ವಿಪರೀತ ಮಟ್ಟವನ್ನು ತಲುಪಿದೆ. ಸುಮಾರು 4000 ವರ್ಷಗಳ ಹಿಂದೆ ಕಬ್ಬಿನ ಸಕ್ಕರೆಯು ಬಳಕೆಗೆ ಬಂತು. ಹದಿನೆಂಟನೇ ಶತಮಾನದ ವೇಳೆಗೆ ಒಬ್ಬಾತ ವರ್ಷಕ್ಕೆ 2 ಕೆಜಿಯಷ್ಟು ಸಕ್ಕರೆಯನ್ನು ಬಳಸುತ್ತಿದ್ದರೆ ಈಗ ಅದು 82 ಕೆಜಿಗಳಷ್ಟಾಗಿದೆ. ಆದಿಮಾನವರು ಹಣ್ಣುಗಳನ್ನು ಹಾಗೂ ಜೇನನ್ನು ಅಪರೂಪಕ್ಕೊಮ್ಮೆ ತಿನ್ನುತ್ತಿದ್ದರೆ, ಇಂದು ಅವನ್ನು ಪ್ರತಿನಿತ್ಯ ಸೇವಿಸುತ್ತಿದ್ದೇವೆ ಹಾಗೂ ಜೋಳದ ಪಾನಕದಂತಹ ಸಿಹಿಕಾರಕಗಳನ್ನೂ ಯಥೇಷ್ಟವಾಗಿ ಬಳಸುತ್ತಿದ್ದೇವೆ. ಸಕ್ಕರೆ ಅಥವಾ ಸುಕ್ರೋಸಿನಲ್ಲಿ ಗ್ಲುಕೋಸ್ ಮತ್ತು ಫ್ರಕ್ಟೋಸ್ ಎರಡೂ ಸೇರಿದ್ದರೆ, ಹಣ್ಣುಗಳು, ಜೇನು ಹಾಗೂ ಜೋಳದ ಪಾನಕಗಳಲ್ಲಿ ಫ್ರಕ್ಟೋಸ್ ಪ್ರಮಾಣವು ಬಹಳಷ್ಟಿರುತ್ತದೆ. ಹೀಗೆ ವಿವಿಧ ಮೂಲಗಳಿಂದ ದಿನವೊಂದರ ಫ್ರಕ್ಟೋಸ್ ಸೇವನೆಯ ತಲಾ ಪ್ರಮಾಣವು ಇಪ್ಪತ್ತನೇ ಶತಮಾನಕ್ಕೆ ಮೊದಲು 10 ಗ್ರಾಂಗಿಂತ ಕಡಿಮೆಯಿದ್ದರೆ, ಈಗ 180 ಗ್ರಾಂಗಳಷ್ಟಾಗಿದೆ.

ಹೀಗೆ ನಾವು ಅತಿಯಾಗಿ ತಿನ್ನುತ್ತಿರುವ ಫ್ರಕ್ಟೋಸ್ ನಮ್ಮ ದೇಹದಲ್ಲಿ ಮದ್ಯಸಾರದಂತೆಯೇ ವರ್ತಿಸುತ್ತದೆ. ಫ್ರಕ್ಟೋಸ್ ಹಾಗೂ ಮದ್ಯಸಾರಗಳೆರಡೂ ಯಕೃತ್ತಿನಲ್ಲಿ ಮೇದೋಆಮ್ಲಗಳ ತಯಾರಿಯನ್ನು ಹೆಚ್ಚಿಸಿ, ಕೊಬ್ಬು ಶೇಖರಗೊಳ್ಳುವುದಕ್ಕೆ ಕಾರಣವಾಗುತ್ತವೆ. ಯಕೃತ್ತಿನ ಕಣಗಳ ಮೇಲೆ ಹಾಗೂ ಕರುಳಿನಲ್ಲಿರುವ ಬ್ಯಾಕ್ಟೀರಿಯಗಳ ಮೇಲೆ ಅವುಗಳ ದುಷ್ಪರಿಣಾಮಗಳಿಂದಾಗಿ ಉರಿಯೂತವುಂಟಾಗುತ್ತದೆ. ಫ್ರಕ್ಟೋಸ್ ಹಾಗೂ ಮದ್ಯಸಾರಗಳೆರಡೂ ಮೆದುಳಿನಲ್ಲಿ ಹಿತಕರವಾದ ಭಾವನೆಗಳನ್ನು ಪ್ರಚೋದಿಸುತ್ತವೆ ಹಾಗೂ ಇನ್ನಷ್ಟು ಸೇವಿಸುವ ಬಯಕೆಯನ್ನುಂಟು ಮಾಡುತ್ತವೆ, ಇದೇ ಕಾರಣಕ್ಕೆ ಸಿಹಿತಿನಿಸುಗಳು, ಹಣ್ಣಿನ ರಸಗಳು, ಸಕ್ಕರೆಭರಿತವಾದ ಲಘು ಪೇಯಗಳನ್ನು ಸೇವಿಸಲಾರಂಭಿಸಿದ ಕೆಲಕಾಲದಲ್ಲೇ ಅದು ಬಿಡಲಾಗದ ಚಟವಾಗಿ, ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಸೇವನೆಯನ್ನು ಪ್ರಚೋದಿಸುತ್ತದೆ, ನಿರಂತರವಾದ ಹಾನಿಗೆ ಕಾರಣವಾಗುತ್ತದೆ. ಗ್ಲೂಕೋಸ್ ಭರಿತವಾದ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದಲೂ ಮೇದೋಆಮ್ಲಗಳ ತಯಾರಿಯು ಹೆಚ್ಚಿ ಯಕೃತ್ತಿನಲ್ಲಿ ಕೊಬ್ಬು ತುಂಬುವುದಕ್ಕೆ ಪ್ರಚೋದನೆಯಾಗುತ್ತದೆ.

ಹೀಗೆ ನಾವಿಂದು ಆಸೆಪಟ್ಟು ತಿನ್ನುತ್ತಿರುವ ಆಹಾರವಸ್ತುಗಳೇ ಯಕೃತ್ತಿನ ಸಮಸ್ಯೆಗಳಿಗೆ ಕಾರಣವಾಗುತ್ತಿರುವುದರಿಂದ ಅದನ್ನು ಬೇಗನೇ ಗುರುತಿಸುವುದು ಹಾಗೂ ತಡೆಯುವುದು ಅತಿ ಮುಖ್ಯ. ಸರಳವಾದ ಅಲ್ಟ್ರಾಸೌಂಡ್ ಪರೀಕ್ಷೆಯಿಂದ ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆ ಹಾಗೂ ಅದರಿಂದಾಗಿರುವ ಹಾನಿಯನ್ನು ಗುರುತಿಸಬಹುದು. ರಕ್ತದಲ್ಲಿ ಎಎಲ್ ಟಿ ಎಂಬ ಕಿಣ್ವದ ಮಟ್ಟವು ದುಪ್ಪಟ್ಟು ಏರಿಕೆಯಾಗಿದ್ದರೆ ಉರಿಯೂತದಿಂದಾಗಿ ಯಕೃತ್ತಿಗೆ ಹಾನಿಯಾಗಿರುವುದನ್ನು ಸೂಚಿಸುತ್ತದೆ. ಬೊಜ್ಜು,ಮಧುಮೇಹ, ಮೇದಸ್ಸಿನ ತೊಂದರೆಗಳು ಹಾಗೂ ಹೃದ್ರೋಗವುಳ್ಳವರು ಅಗತ್ಯವಾಗಿ ತಮ್ಮ ಯಕೃತ್ತಿನ ಸ್ಥಿತಿಯನ್ನು ಪರೀಕ್ಷಿಸಿಕೊಳ್ಳಬೇಕು. ಅದೇ ರೀತಿ, ಯಕೃತ್ತಿನಲ್ಲಿ ಕೊಬ್ಬುಳ್ಳವರು ಮಧುಮೇಹ ಹಾಗೂ ಮೇದಸ್ಸಿನ ಸಮಸ್ಯೆಗಳಿವೆಯೇ ಎಂದು ಪರೀಕ್ಷಿಸಿಕೊಳ್ಳಬೇಕು.

ಆಹಾರದಲ್ಲಿರುವ ಶರ್ಕರಗಳಿಂದ ಹಾಗೂ ಮದ್ಯಸಾರದಿಂದ ಯಕೃತ್ತಿನಲ್ಲುಂಟಾಗುವ ಕಾಯಿಲೆಗಳಿಗೆ ನಿರ್ದಿಷ್ಟವಾದ ಚಿಕಿತ್ಸೆಯಿಲ್ಲ. ಆದ್ದರಿಂದ ಯಕೃತ್ತಿನಲ್ಲಿ ಕೊಬ್ಬು ಶೇಖರಗೊಳ್ಳುತ್ತಿದ್ದರೆ ಹಾಗೂ ರಕ್ತದಲ್ಲಿ ಕೊಬ್ಬಿನ (ಟ್ರೈಗ್ಲಿಸರೈಡ್) ಪ್ರಮಾಣವು ಹೆಚ್ಚಿದ್ದರೆ ಕೂಡಲೇ ಅವನ್ನು ತಡೆಯಲುದ್ಯುಕ್ತರಾಗಬೇಕು. ಮದ್ಯಪಾನ ಸೇವನೆಯನ್ನು ಸಂಪೂರ್ಣವಾಗಿ ವರ್ಜಿಸಬೇಕು. ಮದ್ಯಪಾನಕ್ಕೆ ಸಮನಾದ ಫ್ರಕ್ಟೋಸ್ ಸೇವನೆಯನ್ನು ಕನಿಷ್ಠಗೊಳಿಸಿ, ಗ್ಲೂಕೋಸ್ ಸೇವನೆಯನ್ನೂ ಕಡಿತಗೊಳಿಸಬೇಕು. ಫ್ರಕ್ಟೋಸ್ ನಿಂದ ತುಂಬಿರುವ ಖರ್ಜೂರ, ಒಣ ದ್ರಾಕ್ಷಿ, ಒಣ ಅಂಜೂರ, ಜೇನು, ಲಘು ಪೇಯಗಳು, ಸಕ್ಕರೆ ಹಾಗೂ ಸಿಹಿ ತಿನಿಸುಗಳು, ಐಸ್ ಕ್ರೀಂ ಇವೇ ಮುಂತಾದವನ್ನು ದೂರವಿಡಬೇಕು. ಮಾವು, ಹಲಸು, ದ್ರಾಕ್ಷೆ, ಸೇಬು ಇವೇ ಮುಂತಾದ ಹಣ್ಣುಗಳು ಹಾಗೂ ಹಣ್ಣಿನ ರಸಗಳಲ್ಲೂ ಸಾಕಷ್ಟು ಫ್ರಕ್ಟೋಸ್ ಇರುವುದರಿಂದ ಅವುಗಳ ಅತಿ ಸೇವನೆಯೂ ಸಲ್ಲದು. ಬ್ರೆಡ್ಡು, ನೂಡಲ್ಸ್ ಮುಂತಾದ ಸಂಸ್ಕರಿತ ಆಹಾರಗಳು ಅತ್ಯಧಿಕ ಗ್ಲೂಕೋಸ್ ಒದಗಿಸುವುದರ ಜೊತೆಗೆ ಕರುಳಿನ ಬ್ಯಾಕ್ಟೀರಿಯಾಗಳಲ್ಲಿ ಉರಿಯೂತಜನಕ ಸಂಯುಕ್ತಗಳನ್ನು ಪ್ರಚೋದಿಸುವುದರಿಂದ ಅವುಗಳನ್ನು ಸೇವಿಸದಿರುವುದೇ ಕ್ಷೇಮಕರ. ಫ್ರಕ್ಟೋಸ್ ವಿರಳವಾಗಿರುವ ತರಕಾರಿಗಳು, ಮೊಟ್ಟೆ,ಮೀನು, ಮಾಂಸ ಹಾಗೂ ಬೀಜಗಳು ನಮ್ಮ ಆಹಾರದ ಬಹುಭಾಗವಾಗಿದ್ದರೆ ಯಕೃತ್ತನ್ನು ಕೊಬ್ಬಿನಿಂದ ರಕ್ಷಿಸಬಹುದು, ಹೆಚ್ಚಿನ ಆಧುನಿಕ ರೋಗಗಳನ್ನೂ ದೂರವಿಡಬಹುದು.

Leave a Reply

Your email address will not be published. Required fields are marked *