ಕರುಳಿನ ಸೂಕ್ಷ್ಮಾಣುಗಳಲ್ಲಿದೆ ಎರಡನೇ ಮಿದುಳು

ಆರೋಗ್ಯ ಪ್ರಭ: ಕರುಳಿನ ಸೂಕ್ಷ್ಮಾಣುಗಳಲ್ಲಿದೆ ಎರಡನೇ ಮಿದುಳು [ಕನ್ನಡ ಪ್ರಭ, ಅಕ್ಟೋಬರ್ 15, 2015, ಗುರುವಾರ]

ನಮ್ಮ ಕರುಳಿನೊಳಗೆ ವಾಸಿಸುವ ಶತಲಕ್ಷ ಕೋಟಿ ಸೂಕ್ಷ್ಮಾಣುಗಳು ನಾವು ಜೀರ್ಣಿಸಲಾಗದ ಶರ್ಕರಗಳನ್ನು ಬಳಸಿಕೊಂಡು ಹಲಬಗೆಯ ವಿಶೇಷ ಸಂಯುಕ್ತಗಳನ್ನು ಸ್ರವಿಸುತ್ತವೆ. ಇವು ನಮ್ಮ ಮನಸ್ಥಿತಿಯ ಮೇಲೂ, ವರ್ತನೆಯ ಮೇಲೂ ಪ್ರಭಾವ ಬೀರುತ್ತವೆ. ಹಾಗಾಗಿ ಈ ಸೂಕ್ಷ್ಮಾಣುಗಳನ್ನು ಸುಸ್ಥಿತಿಯಲ್ಲಿಡಬೇಕಾದುದು ಅತಿ ಮುಖ್ಯ.

ಭಯ, ಆತಂಕ, ಪ್ರೀತಿ ಎಂಬಿತ್ಯಾದಿ ಭಾವನೆಗಳನ್ನು ಹೃದಯಕ್ಕೆ ಬದಲಾಗಿ ಕರುಳಿನೊಂದಿಗೆ ತಳುಕು ಹಾಕುವ ಕಾಲ ಬಂದಿದೆ. ಕರುಳು ಹಾಗೂ ಅದರೊಳಗಿನ ಶತಲಕ್ಷ ಕೋಟಿ ಸೂಕ್ಷ್ಮಾಣುಗಳು ಮಿದುಳಿನ ಮೇಲೆ ಪ್ರಭಾವ ಬೀರಿ ನಮ್ಮ ಭಾವನೆಗಳನ್ನೂ, ವರ್ತನೆಯನ್ನೂ ನಿರ್ಧರಿಸುತ್ತವಂತೆ!

ನಮ್ಮ ಪಚನಾಂಗಕ್ಕೆ ಅದರದ್ದೇ ಆದ ನರಮಂಡಲವಿದೆ. ಅದು ನಾವು ತಿಂದ ಆಹಾರದ ಗುಣಾವಗುಣಗಳನ್ನೂ, ಪಚನಾಂಗದ ಸಂವೇದನೆಗಳನ್ನೂ ಗ್ರಹಿಸುತ್ತದೆ, ಹಾಗೂ ಅದಕ್ಕನುಗುಣವಾಗಿ ಕರುಳಿನ ಚಲನೆಯನ್ನೂ, ಸ್ರಾವಗಳನ್ನೂ ನಿಯಂತ್ರಿಸುತ್ತದೆ. ಮುಂಗರುಳಿನುದ್ದಕ್ಕೂ ಹುದುಗಿರುವ ವಿಶೇಷ ಗ್ರಾಹಿಗಳಿಂದ ಸ್ರವಿಸಲ್ಪಡುವ ವಿವಿಧ ಪೆಪ್ಟೈಡ್ ಹಾರ್ಮೋನುಗಳು ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ. ಪಚನಾಂಗದ ಈ ಆಗುಹೋಗುಗಳೆಲ್ಲವೂ ಕರುಳಿನ ನರಗಳು ಹಾಗೂ ಪೆಪ್ಟೈಡುಗಳ ಮೂಲಕ ಸುಪ್ತವಾಗಿ ಮಿದುಳಿಗೆ ತಿಳಿಯುತ್ತಿರುತ್ತವೆ; ಇವುಗಳ ಆಧಾರದಲ್ಲಿ ಮಿದುಳು ನಮ್ಮ ಹಸಿವು-ಸಂತೃಪ್ತಿಗಳನ್ನೂ, ಪಚನಾಂಗದ ಕಾರ್ಯಗಳನ್ನೂ ನಿಯಂತ್ರಿಸುತ್ತದೆ.

ಪ್ರತಿಯೋರ್ವ ಮನುಷ್ಯನ ಕರುಳಿನೊಳಗೆ, ಅದರಲ್ಲೂ ದೊಡ್ಡ ಕರುಳಿನೊಳಗೆ, 700-1000 ವಿಧಗಳಿಗೆ ಸೇರಿದ ಶತಲಕ್ಷ ಕೋಟಿ ಸೂಕ್ಷ್ಮಾಣುಗಳು ವಾಸಿಸುತ್ತವೆ. ನಮ್ಮ ಕರುಳು ಜೀರ್ಣಿಸಲಾಗದ, ಸೊಪ್ಪು-ತರಕಾರಿಗಳಲ್ಲೂ, ಮೂಳೆ-ಮಾಂಸಗಳಲ್ಲೂ ಇರುವ, ಕೆಲವು ಸಂಕೀರ್ಣ ಶರ್ಕರಗಳು ಈ ಸೂಕ್ಷ್ಮಾಣುಗಳಿಗೆ ಆಹಾರವಾಗುತ್ತವೆ; ಅವನ್ನು ಮೇದೋ ಆಮ್ಲಗಳಾಗಿ, ಅನ್ನಾಂಗಗಳಾಗಿ ಪರಿವರ್ತಿಸಿ, ತಾವೂ ಬದುಕಿಕೊಂಡು, ತಾವಿರುವ ಮನುಷ್ಯದೇಹಕ್ಕೂ ನೆರವಾಗುತ್ತವೆ.

ಸೂಕ್ಷ್ಮಾಣುಗಳೊಂದಿಗೆ ನಮ್ಮ ಸಹಬಾಳ್ವೆಯು ಹುಟ್ಟಿದಾಕ್ಷಣದಿಂದ ಆರಂಭಗೊಳ್ಳುತ್ತದೆ. ಮಗು ಹುಟ್ಟುತ್ತಲೇ ತಾಯಿಯ ದೇಹದಲ್ಲಿರುವ ಸೂಕ್ಷ್ಮಾಣುಗಳು ಮೈಯನ್ನು ಮೆತ್ತಿಕೊಳ್ಳುತ್ತವೆ, ಸ್ತನಪಾನದೊಂದಿಗೆ ಕರುಳಿನೊಳಕ್ಕೂ ಪ್ರವೇಶಿಸುತ್ತವೆ. ಮಗು ಬೆಳೆದಂತೆ ಇನ್ನೂ ಹಲವು ವಿಧಗಳ ಸೂಕ್ಷ್ಮಾಣುಗಳು ಕರುಳನ್ನು ಸೇರಿಕೊಳ್ಳುತ್ತವೆ. ಮಗುವಿನ ಪಚನಾಂಗ, ರೋಗರಕ್ಷಣಾ ವ್ಯವಸ್ಥೆ ಹಾಗೂ ಮಿದುಳಿನ ಬೆಳವಣಿಗೆಯಲ್ಲಿ ಈ ಸೂಕ್ಷ್ಮಾಣುಗಳಿಗೆ ಮಹತ್ವದ ಪಾತ್ರವಿದೆಯೆಂದು ಈಗ ಗುರುತಿಸಲಾಗಿದೆ.

ಸೂಕ್ಷ್ಮಾಣುಗಳು ಮನುಷ್ಯರಲ್ಲಿ ಮಾತ್ರವಲ್ಲ, ಇನ್ನಿತರ ಪ್ರಾಣಿಗಳಲ್ಲೂ ಸಹಬಾಳ್ವೆ ನಡೆಸುತ್ತವೆ. ಕೆಲವು ಸೂಕ್ಷ್ಮಾಣುಗಳು ಪ್ರಾಣಿಗಳ ನರಮಂಡಲದ ಮೇಲೆ ಪ್ರಭಾವ ಬೀರಿ, ಅವುಗಳ ವರ್ತನೆಯನ್ನೇ ಬದಲಾಯಿಸಿ, ತಮ್ಮ ಬೆಳವಣಿಗೆಯನ್ನು ಮುಂದುವರಿಸಲು ಅನುಕೂಲ ಮಾಡಿಕೊಳ್ಳುತ್ತವೆ! ಉದಾಹರಣೆಗೆ, ಶಿಲೀಂಧ್ರವೊಂದು ಮರದಲ್ಲಿ ಗೂಡು ಕಟ್ಟುವ ಬಡಗಿ ಇರುವೆಗಳನ್ನು ಹೊಕ್ಕಿ, ಅವುಗಳು ಆಯ ತಪ್ಪಿ ಗೂಡಿನಿಂದ ಹೊರಬೀಳುವಂತೆ ಮಾಡಿ, ಅವುಗಳ ತಲೆಯೊಳಗೆ ಬೆಳೆಯುತ್ತದೆ. ಕೆಲವು ಸೂಕ್ಷ್ಮಹುಳುಗಳು ಮಿಡತೆ ಹಾಗೂ ಇರುವೆಗಳೊಳಕ್ಕೆ ಹೊಕ್ಕಿ, ಅವನ್ನು ನೀರಲ್ಲಿ ಮುಳುಗುವಂತೆ ಮಾಡಿ, ತಾವೇ ನೀರಲ್ಲಿ ಬೆಳೆಯುತ್ತವೆ. ಟೋಕ್ಸೋಪ್ಲಾಸ್ಮಾ ಎಂಬ ಪರೋಪಜೀವಿಯು ಇಲಿಯ ಮಿದುಳೊಳಗೆ ಸೇರಿ, ಬೆಕ್ಕಿನ ಭಯವನ್ನು ನಿವಾರಿಸಿ, ಬೆಕ್ಕಿಗೆ ಸುಲಭವಾಗಿ ಸಿಗುವಂತೆ ಮಾಡಿ, ಆ ಮೂಲಕ ಬೆಕ್ಕಿನ ದೇಹವನ್ನು ಪ್ರವೇಶಿಸಿ ಅಲ್ಲಿ ಬೆಳೆಯುತ್ತದೆ!

ನಮ್ಮ ಕರುಳೊಳಗಿರುವ ಸೂಕ್ಷ್ಮಾಣುಗಳು ನಮ್ಮ ಮಿದುಳಿನ ಮೇಲೆ ಅದೆಂತಹ ಪರಿಣಾಮಗಳನ್ನುಂಟು ಮಾಡುತ್ತವೆ ಎನ್ನುವ ಬಗ್ಗೆ ಬಹು ಆಸಕ್ತಿದಾಯಕವಾದ ಅಧ್ಯಯನಗಳೀಗ ನಡೆಯುತ್ತಿವೆ. ಕರುಳೊಳಗಿನ ನೂರು ಲಕ್ಷ ಕೋಟಿ ಸೂಕ್ಷ್ಮಾಣುಗಳ ಒಟ್ಟು ತೂಕವು ಒಂದೂವರೆ ಕಿಲೋಗ್ರಾಂನಷ್ಟಿದ್ದು, ನಮ್ಮ ಮಿದುಳಿಗೆ ಸರಿದೂಗುತ್ತದೆ. ಈ ಸೂಕ್ಷ್ಮಾಣುಗಳು ಸ್ರವಿಸುವ ಹಲತರದ ಸಂಯುಕ್ತಗಳು ಕರುಳಿನ ಮೇಲೂ, ಅಲ್ಲಿರುವ ನರಗಳ ಮೇಲೂ, ಆ ಮೂಲಕ ಮಿದುಳಿನ ಮೇಲೂ ಪ್ರಭಾವ ಬೀರುತ್ತವೆ ಎನ್ನುವುದನ್ನು ಹಲವು ಅಧ್ಯಯನಗಳು ತೋರಿಸಿವೆ. ಅಂದರೆ ನಮ್ಮ ಕರುಳೊಳಗಿನ ಸೂಕ್ಷ್ಮಾಣುಗಳು ನಮ್ಮ ಭಾವನೆಗಳ ಮೇಲೂ, ವರ್ತನೆಯ ಮೇಲೂ ಪ್ರಭಾವ ಬೀರುವ ಎರಡನೇ ಮಿದುಳಿನಂತೆ ಕಾರ್ಯಾಚರಿಸುತ್ತವೆ!

ಮಗು ಜನಿಸಿದಾಗ ಮಿದುಳು ಇನ್ನೂ ಅಪಕ್ವವಾಗಿರುತ್ತದೆ. ತಾಯಿಯ ಎದೆಹಾಲಿನಲ್ಲಿ ತುಂಬಿರುವ ಹಲವು ವಿಶಿಷ್ಠ ಸಂಯುಕ್ತಗಳು ಮಗುವಿನ ಮಿದುಳನ್ನು ಪೋಷಿಸಿ ಬೆಳೆಸುತ್ತವೆ. ಸ್ತನಪಾನದ ಮೂಲಕ ಕರುಳನ್ನು ಸೇರುವ ಸೂಕ್ಷ್ಮಾಣುಗಳು ಕೂಡ ಮಗುವಿನ ಮಿದುಳಿನ ಬೆಳವಣಿಗೆಗೆ ನೆರವಾಗುತ್ತವೆ. ನವಮಾಸ ತುಂಬಿದ, ಸಹಜವಾಗಿ ಹೆರಿಗೆಯಾದ, ಎದೆಹಾಲನ್ನಷ್ಟೇ ಕುಡಿದ, ಪ್ರತಿಜೈವಿಕಗಳನ್ನು ಸೇವಿಸದ ಶಿಶುಗಳಲ್ಲಿ ಸೂಕ್ಷ್ಮಾಣುಗಳ ಬೆಳವಣಿಗೆಯು ಅತ್ಯುತ್ತಮವಾಗಿರುತ್ತದೆ, ಇದೇ ಕಾರಣಕ್ಕೆ ಮಿದುಳಿನ ಪೋಷಣೆಯೂ ಚೆನ್ನಾಗಿ ನಡೆಯುತ್ತದೆ. ಡಬ್ಬದ ಪುಡಿ ಹಾಗೂ ಪಶುವಿನ ಹಾಲುಗಳು ಮಾನವ ಶಿಶುವಿನ ಮಿದುಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದಿಲ್ಲ, ಮಾತ್ರವಲ್ಲ, ಸ್ತನಪಾನದಿಂದ ದೊರೆಯುವ ಸೂಕ್ಷ್ಮಾಣುಗಳನ್ನೂ ಒದಗಿಸುವುದಿಲ್ಲ. ಪಶುವಿನ ಹಾಲು ಅದರ ಕರುಗಳಿಗಷ್ಟೇ ಸೂಕ್ತ, ನಮ್ಮ ಶಿಶುಗಳಿಗಲ್ಲ.

ನರಮಂಡಲದಲ್ಲಿ ವಾಹಕಗಳಾಗಿ ವರ್ತಿಸುವ ಸೆರೊಟೊನಿನ್, ಗಾಬಾ, ಡೋಪಮಿನ್, ನಾರ್ ಎಪಿನೆಫ್ರಿನ್ ಮುಂತಾದ ಸಂಯುಕ್ತಗಳನ್ನು ಕರುಳೊಳಗಿನ ಸೂಕ್ಷ್ಮಾಣುಗಳು ಕೂಡ ಸ್ರವಿಸುತ್ತವೆ; ನಮ್ಮ ದೇಹದಲ್ಲಿರುವ ಶೇ. 90ರಷ್ಟು ಸೆರೊಟೊನಿನ್ ಹಾಗೂ ಶೇ. 50ರಷ್ಟು ಡೋಪಮಿನ್ ಕರುಳಿನಲ್ಲೇ ಉತ್ಪತ್ತಿಯಾಗುತ್ತದೆ. ಈ ಸೂಕ್ಷ್ಮಾಣುಗಳು ಆಹಾರದ ಶರ್ಕರಗಳನ್ನು ಒಡೆದು ಬಿಡುಗಡೆಗೊಳಿಸುವ ಬ್ಯುಟಿರೇಟ್, ಪ್ರೊಪಿಯೋನೇಟ್, ಅಸಿಟೇಟ್ ಮುಂತಾದ ಕಿರು ಮೇದೋ ಆಮ್ಲಗಳು ಕೂಡ ಮಿದುಳಿನ ಮೇಲೆ ಪ್ರಭಾವ ಬೀರುತ್ತವೆ. ಈ ಸಂಯುಕ್ತಗಳು ಮಿದುಳಿನ ನರವರ್ಧಕ ಪ್ರೊಟೀನ್ (ಬಿಡಿಎನ್ಎಫ್) ಅನ್ನು ಪ್ರಚೋದಿಸುವ ಮೂಲಕ ನರಕೋಶಗಳನ್ನು ಸುಸ್ಥಿತಿಯಲ್ಲಿರಿಸುವುದಕ್ಕೆ ಹಾಗೂ ಹೊಸ ನರಕೋಶಗಳನ್ನು ಬೆಳೆಸುವುದಕ್ಕೆ ನೆರವಾಗುತ್ತವೆ. ನವಜಾತ ಶಿಶುವಿನ ಮಿದುಳಿನಲ್ಲಿ ಅರಿಯುವಿಕೆ, ನೆನಪು, ಸಾಮಾಜಿಕ ಚಟುವಟಿಕೆ ಮುಂತಾದ ಮೂಲಭೂತ ಕಾರ್ಯಗಳಿಗೆ ಸಂಬಂಧಿಸಿದ ಭಾಗಗಳ ಬೆಳವಣಿಗೆಯಲ್ಲಿ ಬಿಡಿಎನ್ಎಫ್ ಹಾಗೂ ಇತರ ಸೂಕ್ಷ್ಮಾಣುಜನ್ಯ ಸಂಯುಕ್ತಗಳು ಮಹತ್ವದ ಪಾತ್ರ ವಹಿಸುತ್ತವೆ ಎನ್ನಲಾಗಿದೆ.

ಒತ್ತಡ, ಭಯ, ಆತಂಕಗಳ ನಿಭಾವಣೆ, ಸಾಮಾಜಿಕ ಪ್ರತಿಸ್ಪಂದನ, ನಿರ್ಧರಿಸುವ ಜಾಣ್ಮೆ, ಹಸಿವು-ಸಂತೃಪ್ತಿಗಳ ನಿಯಂತ್ರಣ ಇತ್ಯಾದಿ ಸಾಮರ್ಥ್ಯಗಳ ಬೆಳವಣಿಗೆಯೂ ತಾಯಿಯ ಆರೈಕೆ, ಎದೆಹಾಲಿನ ಪ್ರಮಾಣ ಹಾಗೂ ಕರುಳಿನ ಸೂಕ್ಷ್ಮಾಣುಗಳ ಸ್ಥಿತಿಗತಿಗಳನ್ನು ಅವಲಂಬಿಸಿರುತ್ತದೆ. ಕರುಳೊಳಗೆ ಪರಸ್ಪರ ಸಹಜೀವನ ನಡೆಸುವ ನೂರಾರು ಜಾತಿಯ ಸೂಕ್ಷ್ಮಾಣುಗಳು ಮನುಷ್ಯರಲ್ಲೂ ಸಾಮಾಜಿಕ ಸಹಬಾಳ್ವೆ ಹಾಗೂ ಪ್ರತಿಸ್ಪಂದನಗಳ ಸ್ವಭಾವವನ್ನು ಬೆಳೆಸುತ್ತವೆ ಎನ್ನಲಾಗಿದೆ. ಮನುಷ್ಯರೊಳಗಿನ ಇಂತಹ ಸಹಬಾಳ್ವೆಯು ಈ ಸೂಕ್ಷ್ಮಾಣುಗಳ ಹರಡುವಿಕೆಗೆ (ತಾಯಿಂದ ಮಗುವಿಗೆ, ಆಹಾರದ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ) ನೆರವಾಗುವುದರಿಂದ ಸೂಕ್ಷ್ಮಾಣುಗಳಿಗೂ ಅದರಿಂದ ಲಾಭವಾಗುತ್ತದೆ! ಎಳವೆಯಲ್ಲಿ ಇಂತಹ ಬೆಳವಣಿಗೆಯಲ್ಲಿ ಲೋಪಗಳಾದರೆ ಜೀವನವಿಡೀ ಸಮಸ್ಯೆಗಳಾಗುವ ಸಾಧ್ಯತೆಗಳಿವೆ.

ಸಾಮಾಜಿಕ ಪ್ರತಿಸ್ಪಂದನೆಗೆ ತೊಡಕುಂಟಾಗುವ ಸ್ವಲೀನತೆಯಂತಹ (ಆಟಿಸಂ) ಸಮಸ್ಯೆಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವುದಕ್ಕೆ ಕರುಳಿನ ಸೂಕ್ಷ್ಮಾಣುಗಳಲ್ಲಾಗುವ ವ್ಯತ್ಯಯಗಳೇ ಕಾರಣವಾಗಿರಬಹುದೆಂದು ಈಗ ತರ್ಕಿಸಲಾಗುತ್ತಿದೆ. ಆಧುನಿಕ ಸಸ್ಯಾಹಾರದ (ಸಕ್ಕರೆ, ಸಂಸ್ಕರಿತ ಧಾನ್ಯಗಳು) ಅತಿಸೇವನೆ, ಗರ್ಭಿಣಿಯರಲ್ಲೂ, ಶಿಶುಗಳಲ್ಲೂ ಪ್ರತಿಜೈವಿಕಗಳ ಅತಿಬಳಕೆ ಇತ್ಯಾದಿಗಳಿಂದ ಶಿಶುಗಳಲ್ಲಿ ಸೂಕ್ಷ್ಮಾಣುಗಳ ಬೆಳವಣಿಗೆಗೆ ತೊಂದರೆಯಾಗಿ, ಮಿದುಳಿನ ಬೆಳವಣಿಗೆಯಲ್ಲಿ ನ್ಯೂನತೆಗಳಾಗಬಹುದೆಂದು ಹೇಳಲಾಗುತ್ತಿದೆ. ಸ್ವಲೀನತೆಯ ಸಮಸ್ಯೆಯುಳ್ಳ ಹೆಚ್ಚಿನ ಮಕ್ಕಳಲ್ಲಿ ಪಚನಾಂಗದ ಸಮಸ್ಯೆಗಳೂ ಸಾಮಾನ್ಯವಾಗಿರುವುದು ಈ ವಾದವನ್ನು ಪುಷ್ಠೀಕರಿಸುವಂತಿದೆ.

ಕರುಳಿನಲ್ಲಿರುವ ಸೂಕ್ಷ್ಮಾಣುಗಳಿಗೆ ಇಷ್ಟವಾದ ಆಹಾರವನ್ನೇ ಮನುಷ್ಯರು ತಿನ್ನುವಂತೆ ಅವು ಪ್ರಭಾವ ಬೀರುವ ಸಾಧ್ಯತೆಗಳೂ ಇವೆ. ಒಂದೇ ಥರದ ಆಹಾರವನ್ನು ಹೆಚ್ಚಾಗಿ ಸೇವಿಸುವವರಲ್ಲಿ ಆ ಆಹಾರಕ್ಕೆ ಸರಿಹೊಂದುವ ಸೂಕ್ಷ್ಮಾಣುಗಳು ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧಿಯಾಗುತ್ತವೆ. ಅಂಥವರು ತಮ್ಮ ಆಹಾರವನ್ನು ಬದಲಿಸಿದರೆ ಆ ಸೂಕ್ಷ್ಮಾಣುಗಳು ಕಷ್ಟಕ್ಕೀಡಾಗುತ್ತವೆ, ವಿಷಕಾರಿ ಸಂಯುಕ್ತಗಳನ್ನು ಸ್ರವಿಸತೊಡಗುತ್ತವೆ. ಇದರಿಂದ ರುಚಿ ಕೆಡುತ್ತದೆ, ಅನಾರೋಗ್ಯದ ಅನುಭವವೂ, ಬೇಸರಿಕೆಯೂ ಉಂಟಾಗುತ್ತದೆ; ತ್ಯಜಿಸಿದ್ದ ಆಹಾರವನ್ನು ಮತ್ತೆ ತಿನ್ನಬೇಕಾದ ಒತ್ತಡವುಂಟಾಗುತ್ತದೆ. ವಿಪರೀತವಾಗಿ ಸಕ್ಕರೆ-ಸಿಹಿಗಳನ್ನು ತಿನ್ನುವವರು ಅವನ್ನು ತ್ಯಜಿಸಿದಾಗ ಕಷ್ಟಕ್ಕೀಡಾಗಿ ಮತ್ತೆ ಸಕ್ಕರೆ-ಸಿಹಿಯ ದಾಸ್ಯಕ್ಕೆ ಬೀಳುವುದು ಹೀಗೆಯೇ.

ವಯಸ್ಕರಲ್ಲಿಯೂ ಕರುಳೊಳಗಿನ ಸೂಕ್ಷ್ಮಾಣುಗಳು ಏರುಪೇರಾದರೆ ಮನಸ್ಥಿತಿ ಹಾಗೂ ವರ್ತನೆಯ ಮೇಲೆ ಪರಿಣಾಮಗಳಾಗಬಹುದು. ಸಕ್ಕರೆ ಹಾಗೂ ಸಂಸ್ಕರಿತ ಧಾನ್ಯಗಳ ಸೇವನೆಯಿಂದ ಕರುಳಿನ ಸೂಕ್ಷ್ಮಾಣುಗಳಲ್ಲಾಗುವ ಬದಲಾವಣೆಗಳು ಖಿನ್ನತೆ, ಆತಂಕ ಮುಂತಾದ ಮಾನಸಿಕ ಸಮಸ್ಯೆಗಳಿಗೂ, ಬೊಜ್ಜು, ಮಧುಮೇಹ, ಹೃದ್ರೋಗ ಮುಂತಾದ ದೈಹಿಕ ಸಮಸ್ಯೆಗಳಿಗೂ ದಾರಿ ಮಾಡುತ್ತವೆ ಎನ್ನಲಾಗಿದೆ. ಟೋಕ್ಸೋಪ್ಲಾಸ್ಮ ಪರೋಪಜೀವಿಯಿಂದ ಸೂಕ್ಷ್ಮಾಣುಗಳಿಗೆ ತೊಂದರೆಯಾಗಿ, ಡೋಪಮಿನ್ ಸ್ರಾವದಲ್ಲಿ ಬದಲಾವಣೆಗಳಾಗಿ ಇಚ್ಛಿತ್ತ ವಿಕಲತೆಗೆ ಕಾರಣವಾಗಬಹುದೆಂಬ ಸಂದೇಹಗಳೂ ವ್ಯಕ್ತವಾಗಿವೆ. ಹಿರಿವಯಸ್ಕರಲ್ಲಿ ಕಂಡುಬರುವ ಅಲ್ಜೀಮರ್ಸ್ ಕಾಯಿಲೆ, ಪಾರ್ಕಿನ್ಸನ್ಸ್ ಕಾಯಿಲೆ ಮುಂತಾದ ಮಿದುಳಿನ ಸಮಸ್ಯೆಗಳಿಗೆ ಸೂಕ್ಷ್ಮಾಣುಮೂಲದ ಡೋಪಮಿನ್ ಇತ್ಯಾದಿ ಸಂಯುಕ್ತಗಳ ಕೊರತೆಯು ಕಾರಣವಿರಬಹುದೇ ಎಂಬ ಬಗ್ಗೆ ಅಧ್ಯಯನಗಳಾಗಬೇಕಿದೆ.

ನಮ್ಮ ಮಿದುಳಿನ ಮೇಲೂ, ಆ ಮೂಲಕ ನಮ್ಮ ಮನಸ್ಥಿತಿ ಹಾಗೂ ವರ್ತನೆಯ ಮೇಲೂ ಪ್ರಭಾವ ಬೀರಬಲ್ಲ ನಮ್ಮೊಳಗಿನ ಸೂಕ್ಷ್ಮಾಣುಗಳನ್ನು ಸುಸ್ಥಿತಿಯಲ್ಲಿಡಬೇಕಾದುದು ಅತಿ ಮುಖ್ಯ. ಸೊಪ್ಪು, ತರಕಾರಿಗಳನ್ನು ಹೆಚ್ಚು ಸೇವಿಸಿ ಒಳ್ಳೆಯ ಸೂಕ್ಷ್ಮಾಣುಗಳನ್ನು ವೃದ್ಧಿಸಬೇಕು, ಸಕ್ಕರೆ ಹಾಗೂ ಸಂಸ್ಕರಿತ ಧಾನ್ಯಗಳನ್ನು ವರ್ಜಿಸಿ ಕೆಟ್ಟ ಸೂಕ್ಷ್ಮಾಣುಗಳನ್ನು ತಡೆಯಬೇಕು. ಪ್ರತಿಜೈವಿಕಗಳು, ನೋವು ನಿವಾರಕಗಳು ಹಾಗೂ ಆಮ್ಲ ನಿರೋಧಕಗಳನ್ನು ಅತಿ ಕಡಿಮೆ ಬಳಸಬೇಕು. ಹೆಚ್ಚೆಚ್ಚು ಊರುಗಳಿಗೆ ಭೇಟಿಯಿತ್ತು, ಅಲ್ಲಿನ ನೀರು-ಆಹಾರಗಳ ಮೂಲಕ ಹೆಚ್ಚೆಚ್ಚು ಬಗೆಯ ಸೂಕ್ಷ್ಮಾಣುಗಳನ್ನು ಪಡೆಯಬೇಕು.

Leave a Reply

Your email address will not be published. Required fields are marked *