ನಾವಿನ್ನು ಕೊಲೆಸ್ಟರಾಲನ್ನು ತಿನ್ನಬಹುದಂತೆ!

ಆರೋಗ್ಯ ಪ್ರಭ: ನಾವಿನ್ನು ಕೊಲೆಸ್ಟರಾಲನ್ನು ತಿನ್ನಬಹುದಂತೆ! [ಕನ್ನಡ ಪ್ರಭ, ಆಗಸ್ಟ್ 20, 2015, ಗುರುವಾರ]

ಕೊಬ್ಬಿನ ಅತಿಸೇವನೆಯಿಂದ ಕೊಲೆಸ್ಟರಾಲ್ ಹೆಚ್ಚಿ ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ಕಳೆದ ಅರುವತ್ತು ವರ್ಷಗಳಿಂದ ಹೆದರಿಸಲಾಗುತ್ತಿತ್ತು. ಕೊಬ್ಬು ನಿಗ್ರಹವು ಲಕ್ಷಗಟ್ಟಲೆ ಕೋಟಿಯ ಉದ್ಯಮವಾಗಿ ಬೆಳೆದಿತ್ತು. ಈ ಕೊಬ್ಬಿನ ಭೂತದ ವಿಮೋಚನೆಗೆ ಕೊನೆಗೂ ಕಾಲ ಕೂಡಿಬಂದಿದೆ.

ಹೊಟ್ಟೆ ತುಂಬ ತಿನ್ನಬಲ್ಲ ಮನುಷ್ಯರ ಬಾಯಿಗೆ ಕಳೆದ ಅರುವತ್ತು ವರ್ಷಗಳಿಂದ ಅಡ್ಡಿಯಾಗುತ್ತಿರುವ ಪೆಡಂಭೂತ ಕೊಲೆಸ್ಟರಾಲ್. ‘ನೀವಿನ್ನು ಮಾಂಸ-ಮೊಟ್ಟೆ ತಿನ್ನಲೇಬಾರದು, ಬೆಣ್ಣೆ, ತೆಂಗಿನೆಣ್ಣೆ ಬಿಟ್ಟು ಬಿಡಿ’ ಎಂಬುದು ಎಲ್ಲ ಹೃದ್ರೋಗಿಗಳಿಗೆ ದೊರೆಯುವ ಕಟ್ಟಪ್ಪಣೆ. ಕೊಲೆಸ್ಟರಾಲ್ ಭಯದಿಂದ ಇವನ್ನೆಲ್ಲ ತಿನ್ನದವರಿಗೂ ಹೃದಯಾಘಾತವಾಗುತ್ತಿರುವುದೇಕೆ? ಚಿಕಿತ್ಸಾರ್ಥಿಗಳು ಇದನ್ನು ಕೇಳುವುದಿಲ್ಲ, ಕೇಳಿದರೂ ವೈದ್ಯರು ಹೇಳುವುದಿಲ್ಲ.

ವೈದ್ಯರಾದರೂ ಹೇಗೆ ಹೇಳಿಯಾರು? ಮಾಂಸ, ಮೊಟ್ಟೆ, ಎಣ್ಣೆ, ಬೆಣ್ಣೆಗಳಲ್ಲಿರುವ ಕೊಬ್ಬುಗಳೇ ಮನುಷ್ಯರ ಅತಿ ದೊಡ್ಡ ಶತ್ರುಗಳೆಂದು ಐವತ್ತರ ದಶಕದಿಂದಲೇ ಕೂಗಲಾಗುತ್ತಿದೆ. ಕೊಬ್ಬು ದೇಹದ ಕಣಕಣದಲ್ಲೂ, ಮಿದುಳಿನಲ್ಲೂ ತುಂಬಿಕೊಂಡಿದೆ, ದೇಹದ ಎಲ್ಲ ಪ್ರಕ್ರಿಯೆಗಳಿಗೂ ಅತ್ಯಗತ್ಯವಾಗಿದೆ, ಆದ್ದರಿಂದ ಅದು ಶತ್ರುವಾಗಲು ಸಾಧ್ಯವಿಲ್ಲ ಎಂದ ವೈದ್ಯವಿಜ್ಞಾನಿಗಳ ಪ್ರತಿರೋಧವನ್ನೆಲ್ಲ ಅತಿ ವ್ಯವಸ್ಥಿತವಾಗಿ ಮಟ್ಟ ಹಾಕಲಾಗಿದೆ. ಈ ಗದ್ದಲ-ಗೊಂದಲದಲ್ಲಿ ಹೃದ್ರೋಗಕ್ಕೆ ನಿಜವಾದ ಕಾರಣವೇನೆನ್ನುವುದು ಅಡಗಿ ಹೋಗಿದೆ.

ಕಳೆದ ಮೂವತ್ತು ವರ್ಷಗಳಲ್ಲಿ ಕೊಬ್ಬು ದೂಷಣೆಯು ಬೃಹತ್ ಉದ್ಯಮವಾಗಿ ಬೆಳೆದಿದೆ. ಸೊನ್ನೆ ಕೊಬ್ಬು, ಕಡಿಮೆ ಕೊಬ್ಬು, ಒಳ್ಳೆ ಕೊಬ್ಬು ಎಂಬ ಹೆಸರಲ್ಲಿ 15000ಕ್ಕೂ ಹೆಚ್ಚು ತಿನಿಸುಗಳು ವರ್ಷಕ್ಕೆ ಮೂರು ಲಕ್ಷ ಕೋಟಿ ಡಾಲರು (200 ಲಕ್ಷ ಕೋಟಿ ರೂ.) ಗಳಿಗೂ ಹೆಚ್ಚು ವಹಿವಾಟು ಮಾಡುತ್ತಿವೆ, ಇವುಗಳ ಪ್ರಚಾರಕ್ಕೆಂದೇ ಸಾವಿರಗಟ್ಟಲೆ ಕೋಟಿ ಖರ್ಚಾಗುತ್ತಿದೆ. ಕೊಬ್ಬಿಳಿಸುವ ಶಸ್ತ್ರಚಿಕಿತ್ಸೆಗಳು, ವ್ಯಾಯಾಮ ಶಾಲೆಗಳು, ಯೋಗ ಶಾಲೆಗಳು ಇನ್ನೊಂದಷ್ಟು ಸಾವಿರ ಕೋಟಿ ಸೆಳೆಯುತ್ತಿವೆ. ಕೊಲೆಸ್ಟರಾಲ್ ಇಳಿಸುವ ಸ್ಟಾಟಿನ್ ಗಳಿಂದ ವರ್ಷಕ್ಕೆ ಒಂದೂವರೆ ಲಕ್ಷ ಕೋಟಿ ರೂಪಾಯಿಗೂ ಮಿಕ್ಕಿದ ಆದಾಯವಿದೆ. ಕೊಬ್ಬಿನ ಭೂತಕ್ಕೆ ಕಾಣಿಕೆಯೆಷ್ಟು!

ಆದರೆ ಕೊಬ್ಬಿನ ಭೂತದ ಅಂತ್ಯಕಾಲ ಸನ್ನಿಹಿತವಾದಂತಿದೆ, ಲಕ್ಷಗಟ್ಟಲೆ ಕೋಟಿಯ ಕೊಬ್ಬು ನಿಗ್ರಹ ವಹಿವಾಟಿನ ಅಡಿಪಾಯವೇ ಅಲುಗಾಡತೊಡಗಿದೆ.

ಅಮೆರಿಕದ ಹೃದ್ರೋಗ ತಜ್ಞರು ನವಂಬರ್ 2013ರಲ್ಲಿ ಪ್ರಕಟಿಸಿದ ಹೊಸ ವರದಿಯಲ್ಲಿ, ರಕ್ತದ ಕೊಲೆಸ್ಟರಾಲ್ ಪ್ರಮಾಣವನ್ನಿಳಿಸಲು ಔಷಧಗಳನ್ನು ಸೇವಿಸುವ ಅಗತ್ಯವಿಲ್ಲವೆಂದೂ, ಹಾಗೆ ಇಳಿಸುವುದರಿಂದ ಹೃದಯಾಘಾತವೂ ಸೇರಿದಂತೆ ರಕ್ತನಾಳಗಳ ಕಾಯಿಲೆಯನ್ನು ತಡೆಯಬಹುದೆನ್ನುವುದಕ್ಕೆ ಸಾಕಷ್ಟು ಆಧಾರಗಳಿಲ್ಲವೆಂದೂ ಸ್ಪಷ್ಟವಾಗಿ ಹೇಳಲಾಗಿದೆ. ಕೊಲೆಸ್ಟರಾಲ್ ಗುಮ್ಮನನ್ನು ತೋರಿದ್ದವರೇ ಅದಕ್ಕಿನ್ನು ಮದ್ದಿನ ಅಗತ್ಯವಿಲ್ಲ ಎಂದಿದ್ದಾರೆ.

ಮತ್ತೀಗ ಫೆಬ್ರವರಿಯಲ್ಲಿ ಅಮೆರಿಕದ ಸರಕಾರವು ಪ್ರತೀ ಐದು ವರ್ಷಗಳಿಗೊಮ್ಮೆ ಪ್ರಕಟಿಸುವ ಆಹಾರ ಮಾರ್ಗದರ್ಶಿಯ ಕರಡು ಹೊರಬಿದ್ದಿದೆ; ಸೇವಿಸುವ ಆಹಾರದಲ್ಲಿ ಕೊಲೆಸ್ಟರಾಲ್ ಪ್ರಮಾಣವು ದಿನಕ್ಕೆ 300ಮಿಗ್ರಾಂ ಮೀರಬಾರದೆಂದು ಈ ಹಿಂದೆ ನೀಡಲಾಗಿದ್ದ ಸಲಹೆಯನ್ನು ಕೈಬಿಡಲಾಗುತ್ತಿದೆಯೆಂದೂ, ಆಹಾರದ ಕೊಲೆಸ್ಟರಾಲ್ ಪ್ರಮಾಣಕ್ಕೂ, ರಕ್ತದ ಕೊಲೆಸ್ಟರಾಲ್ ಪ್ರಮಾಣಕ್ಕೂ ಸಂಬಂಧಗಳಿಲ್ಲವೆನ್ನುವುದು ಸ್ಪಷ್ಟವಾಗಿದೆಯೆಂದೂ, ಕೊಲೆಸ್ಟರಾಲ್ ಅತಿ ಸೇವನೆಯ ಬಗ್ಗೆ ಕಾಳಜಿಯ ಅಗತ್ಯವಿಲ್ಲವೆಂದೂ ಈ ಕರಡಿನಲ್ಲಿ ಹೇಳಲಾಗಿದೆ. ನಲುವತ್ತು ವರ್ಷಗಳಿಂದ ಕೊಲೆಸ್ಟರಾಲ್ ಭೂತವನ್ನು ಕುಣಿಸುತ್ತಿದ್ದ ಅಮೆರಿಕದ ಸರಕಾರವೇ ಈಗ ಭೂತ ವಿಮೋಚನೆಗೆ ಮುಂದಾಗಿದೆ.

ಈ ಹಿಂಪಡೆತಕ್ಕೆ ಕಾರಣಗಳೇನೆನ್ನುವುದೂ ಆ ಕರಡಿನಲ್ಲಿದೆ. ಅಮೆರಿಕದಲ್ಲಿ ಹನ್ನೆರಡು ಕೋಟಿ ಜನರು, ಜನಸಂಖ್ಯೆಯ ಅರ್ಧದಷ್ಟು, ರಕ್ತದೊತ್ತಡ, ಮಧುಮೇಹ, ಹೃದ್ರೋಗ, ಕ್ಯಾನ್ಸರ್ ಮುಂತಾದ ಆಧುನಿಕ ರೋಗಗಳಿಂದ ನರಳುತ್ತಿದ್ದಾರೆ; ಮೂವರಲ್ಲಿ ಇಬ್ಬರಿಗಿಂತಲೂ ಹೆಚ್ಚು ವಯಸ್ಕರು, ಹಾಗೂ ಮೂವರಲ್ಲಿ ಒಬ್ಬರಿಗಿಂತಲೂ ಹೆಚ್ಚು ಮಕ್ಕಳು ಮತ್ತು ಯುವಜನರು ಅತಿ ತೂಕ ಯಾ ಬೊಜ್ಜು ಪೀಡಿತರಾಗಿದ್ದಾರೆ. ಆಹಾರಕ್ಕೆ ಸಂಬಂಧಿಸಿದ ಈ ಸಮಸ್ಯೆಗಳನ್ನು ತಡೆಯುವುದಕ್ಕೆ ದೃಢವಾದ, ನೂತನವಾದ ಕಾರ್ಯಯೋಜನೆಯನ್ನು ಧೈರ್ಯದಿಂದ ಕೈಗೊಳ್ಳಬೇಕಾಗಿದೆ ಎಂದು ಕರಡಿನಲ್ಲಿ ಹೇಳಲಾಗಿದೆ. ಅಮೆರಿಕದ ಸರಕಾರಕ್ಕೆ ತನ್ನ ಹಳೆಯ ಸುಳ್ಳನ್ನು ತಿದ್ದುವುದಕ್ಕೆ ಹೊಸ ಧೈರ್ಯ ಬೇಕಾಗಿದೆ!

ಕೊಬ್ಬು ಮನುಷ್ಯನ ಮೊದಲ ವೈರಿ ಎಂಬ ವಾದವು ಹುಟ್ಟಿದ್ದು 1950ರ ಮೊದಲಲ್ಲಿ. ಅಮೆರಿಕದ ಮಿನೆಸೋಟ ವಿಶ್ವವಿದ್ಯಾಲಯದಲ್ಲಿ ಶರೀರ ವಿಜ್ಞಾನಿಯಾಗಿದ್ದ ಆನ್ಸೆಲ್ ಕೀಸ್ ಅವರನ್ನು ಈ ಸಿದ್ಧಾಂತದ ಜನಕನೆಂದು ಪರಿಗಣಿಸಲಾಗುತ್ತದೆ. ಎರಡನೇ ಮಹಾಯುದ್ಧದ ನಂತರದಲ್ಲಿ ಅಮೆರಿಕದ ಶ್ರೀಮಂತರಲ್ಲಿ ಹೃದಯಾಘಾತವು ಹೆಚ್ಚುತ್ತಿದ್ದರೆ, ಯುದ್ಧದಿಂದ ಕಂಗೆಟ್ಟಿದ್ದ ಯೂರೋಪಿನಲ್ಲಿ ಅದು ಕಡಿಮೆಯಾಗುತ್ತಿದ್ದುದನ್ನು ಕೀಸ್ ಗಮನಿಸಿದ್ದರು. ಅಮೆರಿಕದ ಶ್ರೀಮಂತರು ಬಹಳಷ್ಟು ಕೊಬ್ಬಿನಂಶವಿರುವ ಆಹಾರವನ್ನು ಸೇವಿಸುತ್ತಿರುವುದರಿಂದ, ಅದೇ ಕೊಬ್ಬು ಕೊಲೆಸ್ಟರಾಲನ್ನು ಹೆಚ್ಚಿಸಿ, ಅದುವೇ ರಕ್ತನಾಳಗಳೊಳಕ್ಕೆ ಸೇರಿ ಉಬ್ಬುಗಳನ್ನುಂಟು ಮಾಡಿ ಹೃದಯಾಘಾತವನ್ನುಂಟು ಮಾಡುತ್ತದೆ ಎನ್ನುವ ತರ್ಕವನ್ನು ಕೀಸ್ ಮುಂದಿಟ್ಟರು. ಶ್ರೀಮಂತರು ತಿನ್ನುವುದೂ ಹೆಚ್ಚು, ಅವರಲ್ಲಿ ಹೃದಯಾಘಾತವೂ ಹೆಚ್ಚು ಎನ್ನುವುದು ನಿಜವಿದ್ದರೂ, ಕೊಬ್ಬು ತಿಂದು ರಕ್ತನಾಳ ಕೆಡುತ್ತದೆ ಎನ್ನುವುದಕ್ಕೆ ಯಾವ ಆಧಾರವೂ ಇರಲಿಲ್ಲ. ಹಾಗಿದ್ದರೂ ಕೀಸ್ ಸಿದ್ಧಾಂತವನ್ನು ಹಲವರು ಅಪ್ಪಿಕೊಂಡರು.

ಅಮೆರಿಕದ ಹೃದ್ರೋಗ ಸಂಘವು ಕೀಸ್ ಅವರ ವಾದವನ್ನು ಹಾಗೆಯೇ ಒಪ್ಪಿಕೊಂಡಿತು; ಬೆಣ್ಣೆ, ಮೊಟ್ಟೆ, ಪಶು ಮಾಂಸಗಳ ಸೇವನೆಯು ಹೃದಯದ ರಕ್ತನಾಳಗಳ ಕಾಯಿಲೆಗೆ ಕಾರಣವಾಗುತ್ತದೆಂದು 1956ರಲ್ಲಿ ಘೋಷಿಸಿಯೇ ಬಿಟ್ಟಿತು. ಅದೇ ಸಂಘವು 1961ರಲ್ಲಿ ಇನ್ನೊಂದು ವರದಿಯನ್ನು ಹೊರಡಿಸಿ, ಮೊಟ್ಟೆ, ಇಡೀ ಹಾಲು, ಕೆನೆ, ಗಿಣ್ಣು, ಬೆಣ್ಣೆ, ತೆಂಗಿನೆಣ್ಣೆ, ಮಾಂಸಗಳು ಪರ್ಯಾಪ್ತ ಮೇದಸ್ಸನ್ನು ಹೊಂದಿರುವುದರಿಂದ ಕೊಲೆಸ್ಟರಾಲ್ ಹೆಚ್ಚಳಕ್ಕೆ ಕಾರಣವಾಗಬಲ್ಲವೆಂದೂ, ಜೋಳದ ಎಣ್ಣೆ, ಹತ್ತಿ ಎಣ್ಣೆ, ಸೋಯಾ ಎಣ್ಣೆಗಳು ಅದನ್ನು ಇಳಿಸಬಲ್ಲವೆಂದೂ ಹೇಳಿತು.

ಅಲ್ಲಿಗೆ ಕೊಬ್ಬಿನ ಭೂತ ದೊಡ್ಡದಾಗಿ ಎದ್ದು ನಿಂತಿತು; ಶತಶತಮಾನಗಳಿಂದ ಬಳಸಲಾಗುತ್ತಿದ್ದ ತೆಂಗಿನೆಣ್ಣೆ, ಮಾಂಸ, ಮೊಟ್ಟೆ ಇತ್ಯಾದಿಗಳು ಶತ್ರುಗಳಾಗಿ, ಆಗಿನ್ನೂ ಹೊಸದಾಗಿದ್ದ ಸಂಸ್ಕರಿತ ಖಾದ್ಯತೈಲಗಳು, ಕೆನೆ ತೆಗೆದ ಹಾಲು ಮಿತ್ರರಾದವು, ಬೃಹತ್ ಉದ್ಯಮಗಳಾದವು. ಇವಕ್ಕೆಲ್ಲ ಆಧಾರಗಳೇನೆಂದು ಹೆಚ್ಚಿನವರು ಕೇಳಲಿಲ್ಲ, ಕೇಳಿದವರನ್ನು ಯಾರೂ ಗಮನಿಸಲಿಲ್ಲ. ಸಂಪೂರ್ಣವಾಗಿ ಮಾಂಸಾಹಾರವನ್ನೇ ನೆಚ್ಚಿಕೊಂಡ ಕೆನ್ಯಾದ ಮಸಾಯಿ ಬುಡಕಟ್ಟಿನವರಲ್ಲಿ ಹೃದ್ರೋಗವೆಂಬುದೇ ಇಲ್ಲವೆಂದು ಪ್ರತಿಷ್ಠಿತ ವಾಂಡರ್ ಬಿಲ್ ವಿಶ್ವವಿದ್ಯಾಲಯದ ಜಾರ್ಜ್ ಮಾನ್ ಆಗಲೇ ಶ್ರುತ ಪಡಿಸಿದರಾದರೂ ಯಾರಿಗೂ ಅದು ಬೇಡವಾಯಿತು. ಸಕ್ಕರೆಯ ಸೇವನೆಯೇ ಆಧುನಿಕ ರೋಗಗಳಿಗೆ ಕಾರಣವೆಂದು ಅದಕ್ಕೂ ಮೊದಲು ಹಲವರು ಹೇಳಿದ್ದುದು ಮೂಲೆ ಸೇರಿತು.

ಹೆಚ್ಚಿನ ಆಧಾರಗಳಿಲ್ಲದೆಯೂ ಕೊಬ್ಬು ವಿರೋಧಿ ಸಿದ್ಧಾಂತವು ಹೀಗೆ ಬೆಳೆಯುತ್ತಲೇ ಹೋಯಿತು; 1977ರಲ್ಲಿ ಕೆಲ ವಿಜ್ಞಾನಿಗಳು ಮತ್ತು ರಾಜಕಾರಣಿಗಳ ಒತ್ತಾಸೆಯಿಂದ ಅಮೆರಿಕಾದ ಸರಕಾರವು ಆಹಾರ ಮಾರ್ಗದರ್ಶಿಯನ್ನು ಪ್ರಕಟಿಸಿ, ಕೊಬ್ಬಿನ ಬಳಕೆಗೆ ಗಟ್ಟಿಯಾದ ಕಡಿವಾಣ ಹಾಕಿತು, 1983ರಲ್ಲಿ ಬ್ರಿಟಿಷ್ ಸರಕಾರವೂ ಅದನ್ನು ಹಿಂಬಾಲಿಸಿತು. ವಿಜ್ಞಾನಿ ಡೇವಿಡ್ ಕ್ರಿಚೆವ್ ಸ್ಕಿ ಹೇಳಿದಂತೆ,  ಅಮೆರಿಕನರಿಗೆ ದೇವರು ಮತ್ತು ಕಮ್ಯೂನಿಸ್ಟರಿಗಿಂತ ಕೊಬ್ಬಿನ ಭಯವೇ ಹೆಚ್ಚಾಯಿತು!

ಹೀಗೆ ಕೊಬ್ಬಿನ ಸೇವನೆಯನ್ನು ಕಡಿತಗೊಳಿಸಿದ ಬಳಿಕ ಆಧುನಿಕ ರೋಗಗಳು ಕಡಿಮೆಯಾದವೇ? ಇಲ್ಲ, ಹೆಚ್ಚಾದವು! ಕೊಬ್ಬನ್ನು ಬಿಟ್ಟು ಸಕ್ಕರೆ-ಸಂಸ್ಕರಿತ ತಿನಿಸುಗಳ ಸೇವನೆ ಹೆಚ್ಚಿದಂತೆ ಬೊಜ್ಜು ಹೆಚ್ಚುತ್ತಲೇ ಹೋಯಿತು, ಹೃದ್ರೋಗ, ಮಧುಮೇಹಗಳೂ ಹೆಚ್ಚಿದವು, ಕಿರಿಯರನ್ನೂ ಕಾಡತೊಡಗಿದವು. ಹಾಗಿದ್ದರೂ ಕೊಬ್ಬೇ ಪರಮ ವೈರಿಯೆಂದು ಸಾಧಿಸಲು 1988ರಲ್ಲಿ ಅಮೆರಿಕದ ಸರಕಾರವು ಸಮಿತಿಯೊಂದನ್ನು ರಚಿಸಿತು; ಹತ್ತು ವರ್ಷ ಹುಡುಕಿದರೂ ಕೊಬ್ಬನ್ನು ಹಳಿಯುವುದಕ್ಕೆ ಆಧಾರಗಳು ದೊರೆಯದೆ ಸಮಿತಿಯು ಸುಮ್ಮನಾಗಬೇಕಾಯಿತು. ಈ ಸಮಿತಿಯ ಕೆಲ ಸದಸ್ಯರ ಹೇಳಿಕೆಗಳನ್ನಾಧರಿಸಿ ಅಮೆರಿಕದ ಹಿರಿಯ ಪತ್ರಕರ್ತ ಗಾರಿ ಟಾಬ್ಸ್ ಪ್ರತಿಷ್ಠಿತ ಸಯನ್ಸ್ ಪತ್ರಿಕೆಯಲ್ಲಿ ‘ಆಹಾರದಲ್ಲಿ ಕೊಬ್ಬಿನಂಶದ ಹಸಿ ವಿಜ್ಞಾನ’ ಎಂಬ ಲೇಖನವನ್ನೇ ಬರೆದರು.(ಸಯನ್ಸ್, 2001;292:2536-45)

ಪರ್ಯಾಪ್ತ ಕೊಬ್ಬು ಅಥವಾ ಕೊಲೆಸ್ಟರಾಲ್ ಭರಿತ ಆಹಾರದ ಸೇವನೆಯಿಂದ ಆಧುನಿಕ ರೋಗಗಳು ಹೆಚ್ಚುವುದಿಲ್ಲ, ಬದಲಿಗೆ ಸಕ್ಕರೆಭರಿತವಾದ ಆಹಾರದಿಂದ ಹೆಚ್ಚುತ್ತವೆ ಎನ್ನುವುದಕ್ಕೆ ಗಟ್ಟಿಯಾದ ಆಧಾರಗಳು ಈಗ ಲಭ್ಯವಿವೆ. ಹಾವರ್ಡ್ ವಿದ್ಯಾಲಯವು ಮೂರು ಲಕ್ಷ ಅಮೆರಿಕನರಲ್ಲಿ ನಡೆಸಿದ ಅಧ್ಯಯನಗಳು, ನಾರ್ವೇ ವಿಶ್ವವಿದ್ಯಾಲಯದಲ್ಲಿ 52000 ವಯಸ್ಕರಲ್ಲಿ ನಡೆಸಲಾದ ಅಧ್ಯಯನ, ಆರು ಲಕ್ಷಕ್ಕೂ ಹೆಚ್ಚು ಜನರನ್ನೊಳಗೊಂಡಿದ್ದ 76 ಅಧ್ಯಯನಗಳ ಮಹಾವಿಮರ್ಶೆ, ಮೂರೂವರೆ ಲಕ್ಷ ಜನರನ್ನು 5-23 ವರ್ಷಗಳ ಕಾಲ ಗಮನಿಸಿದ್ದ 21 ಅಧ್ಯಯನಗಳ ಇನ್ನೊಂದು ವಿಮರ್ಶೆ ಕೆಲವು ಉದಾಹರಣೆಗಳಷ್ಟೇ.

ಇದೇ ಕಾರಣಕ್ಕೆ ಅಮೆರಿಕದ ಸರಕಾರವು ಕೊಬ್ಬಿನ ಮೇಲೆ ಹೊರಿಸಿದ್ದ ಮಿಥ್ಯಾಪವಾದವನ್ನು ಈಗ ಹಿಂಪಡೆಯಹೊರಟಿದೆ. ಆಹಾರದ ಕೊಲೆಸ್ಟರಾಲ್ ಪ್ರಮಾಣವನ್ನು ಪರಿಗಣಿಸಬೇಕಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವುದರ ಜೊತೆಗೆ, ತರಕಾರಿಗಳು, ಜಲಚರಗಳು, ದ್ವಿದಳ ಧಾನ್ಯಗಳು, ಬೀಜಗಳು ಆರೋಗ್ಯಕ್ಕೆ ಒಳ್ಳೆಯವೆಂದೂ, ಕೆಂಪು ಮಾಂಸವನ್ನು ಹಿತಮಿತವಾಗಿ ಸೇವಿಸಬಹುದೆಂದೂ ಹೊಸ ಆಹಾರ ಮಾರ್ಗದರ್ಶಿಯ ಕರಡಿನಲ್ಲಿ ಹೇಳಲಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ, ಸಕ್ಕರೆ, ಸಿಹಿತಿನಿಸುಗಳು, ಪೇಯಗಳು ಹಾಗೂ ಸಂಸ್ಕರಿತ ಧಾನ್ಯಗಳ ಸಿದ್ಧತಿನಿಸುಗಳು ಎಲ್ಲಾ ಆಧುನಿಕ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಅದರಲ್ಲಿ ಹೇಳಲಾಗಿದೆ. ಆ ಮೂಲಕ, ಕೊಬ್ಬಿಗಿಂತ ಸಕ್ಕರೆಯೇ ಮನುಷ್ಯನ ಆದ್ಯ ವೈರಿ ಎನ್ನುವುದನ್ನು ಕೊನೆಗೂ ಒಪ್ಪಿಕೊಂಡಂತಾಗಿದೆ. ನೀವಿನ್ನು ಸಕ್ಕರೆಯನ್ನು ವರ್ಜಿಸಿದರಾಯಿತು, ತೆಂಗಿನೆಣ್ಣೆ, ಬೆಣ್ಣೆ, ಮೊಟ್ಟೆ, ಮೀನು ತಿನ್ನಬಹುದು!

Leave a Reply

Your email address will not be published. Required fields are marked *